ಪಡಪಾಟಲು ಪಟ್ಟ ನಂತರ ಹಂಸಲೇಖಾ ಮೆಗಾಧಾರಾವಾಹಿ
ಕೊನೆಗೂ ಹಂಸಲೇಖಾ ಧಾರಾವಾಹಿ ಡಬ್ಬಕ್ಕೆ ಈ ಟಿವಿಯಲ್ಲಿ ಜಾಗ ಸಿಕ್ಕಿದೆ. ಇದೇ ಸೆಪ್ಟೆಂಬರ್ 30ರಿಂದ ಅವರ ಮಹತ್ವಾಕಾಂಕ್ಷೆಯ ಮೆಗಾ ಧಾರಾವಾಹಿ 'ಪ್ರೀತಿಗಾಗಿ" ಬೆಳಕು ಕಾಣಲಿದೆ.
ಈ ಸ್ಲಾಟನ್ನು ಪಡೆಯಲು ಹಂಸಲೇಖ ಹೆಣಗಾಟ ನಡೆಸಿದ್ದಾರೆ. ಮೊದಲು 'ಗೌತಮಿ" ಸ್ಲಾಟು ಇದಕ್ಕೆ ಕೊಡಕ್ಕಾಗಲ್ಲ ಅಂದರು ರಾಮೋಜಿ ಅಂಡ್ ಫ್ರೆಂಡ್ಸ್. ರವಿ ಕಿರಣ್ ಸಾರಥ್ಯದ 'ಬಾಂಧವ್ಯ" ಮೆಗಾ ಧಾರಾವಾಹಿ ಮುಗಿಯುವ ಮುನ್ನವೇ 'ಸ್ಪಂದನ" ಎಂಬ ಇನ್ನೊಂದು ರೋದನ ರೆಡಿಮಾಡಿಟ್ಟುಕೊಂಡು ಅದೇ ಸ್ಲಾಟನ್ನು ಬುಕ್ ಮಾಡಿಕೊಂಡಿದ್ದರು. 'ಗೌತಮಿ" ರೂವಾರಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ಗೆ ಯದ್ವಾ ತದ್ವಾ ತೆಗಳಿಕೆ ಸಿಕ್ಕ ಕಾರಣ ಸದ್ಯಕ್ಕೆ ಇನ್ನೊಂದು ಕೆಟ್ಟ ಕನ್ನಡ ಧಾರಾವಾಹಿ ಸಾಹಸಕ್ಕೆ ಕೈಹಾಕಲಿಲ್ಲ. ಇದೇ ಹಂಸಲೇಖಾಗೆ ವರವಾಗಿದೆ. ರವಿಕಿರಣ್ ಸ್ಲಾಟ್ಗೆ ರಾತ್ರಿ ಎಂಟೂವರೆ ಗಂಟೆಯಿಂದ ಏಳೂವರೆ ಗಂಟೆಗೆ ಬಡ್ತಿ ಸಿಕ್ಕಿದೆ. ತೆರವಾಗಿರುವ ಎಂಟೂವರೆಯಿಂದ 9 ಗಂಟೆಯ ಸ್ಲಾಟು ಸಾಕಷ್ಟು ಅಲವತ್ತುಕೊಂಡ ನಂತರ ಹಂಸಲೇಖಾಗೆ ಸಿಕ್ಕಿದೆ.
ಅಂದಹಾಗೆ, ಈ ಮೆಗಾ ಧಾರಾವಾಹಿಯ ಪ್ರಧಾನ ನಿರ್ದೇಶಕ ಚಿಂದೋಡಿ ಲೀಲಾ ಸೋದರ ಚಿಂದೋಡಿ ಬಂಗಾರ್. ಕತೆ- ಸಾಹಿತ್ಯ- ಸಂಗೀತ ಹಂಸಲೇಖರದ್ದೇ. ಇದನ್ನು ಖುದ್ದು ಹಂಸಲೇಖ ಸಣ್ಣಗೆ ಎದೆ ತಟ್ಟಿಕೊಂಡು ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಹಾರ್ಟ್ ಆಪರೇಷನ್ ಆಗಿರುವುದರಿಂದ ಅವರು ಜೋರಾಗಿ ಎದೆತಟ್ಟಿಕೊಳ್ಳುವ ಹಾಗಿಲ್ಲ !
ಸುಮಾರು ಅರುವತ್ತು ಹಾಡುಗಳನ್ನು 26 ದೇಶೀ ಮತ್ತು ಪರದೇಶೀ ಗಾಯಕ/ಗಾಯಕಿಯರು ಹಾಡಿರುವುದು ಈ ಧಾರಾವಾಹಿಯ ವಿಶೇಷ.ಇದನ್ನೂ ಓದಿ...


Click it and Unblock the Notifications