ನಾನೇ ಬೇರೆ... ನನ್ನ ಸ್ಟೈಲೇ ಬೇರೆ... -ಗುರುಪ್ರಸಾದ್‌

By Staff


‘ಮಠ’ ಅನ್ನೋ ಚಿತ್ರ ಮಾಸ್‌ ಮತ್ತು ಕ್ಲಾಸ್‌ ಜನರನ್ನು ತಲುಪಿದ ಕತೆ, ಯಾರಿಗೆ ಗೊತ್ತಿಲ್ಲ? ಈ ಚಿತ್ರದ ನಿರ್ದೇಶಕ ಗುರುಪ್ರಸಾದ್‌, ತಮ್ಮ ಮುಂದಿನ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ. ಅವರ ಜೊತೆ ದಟ್ಸ್‌ ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಗುರು ಅವರ ಇನ್ನಷ್ಟು ಮುಖಗಳ ಅನಾವರಣ.

‘ನಮ್ಮದು ಡಿಫರೆಂಟ್‌ ಸಿನಿಮಾ ’ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮಾಡೋದು ಮಾತ್ರ, ಅದೇ ಫಾರ್ಮುಲಾ ಸಿನಿಮಾ. ನಿಜಕ್ಕೂ ಡಿಫರೆಂಟ್‌ ಸಿನಿಮಾ ಮಾಡೋದು, ಪಾರ್ಕಲ್ಲಿ ಕಡಲೆಕಾಯಿ ತಿಂದಷ್ಟು ಸುಲಭವಲ್ಲ. ಅದೊಂದು ತಪಸ್ಸು, ಅದೊಂದು ಸವಾಲು, ಅದೊಂದು ಕಲೆ.

ಬುದ್ಧಿಗೆ ಹೊಳಪು ನೀಡಿ, ಹೊಸ ರೀತಿ ಯೋಚಿಸುವ ನಿರ್ದೇಶಕರು ಸ್ಯಾಂಡಲ್‌ವುಡ್‌ನಲ್ಲಿ ಕಾಣ್ತಾನೇ ಇಲ್ಲ ಅನ್ನೋ ಕೊರತೆಯನ್ನು ನೀಗಿಸುವಂತೆ ಕೆಲವು ಹೊಸ ಮುಖಗಳು ಕಾಣಿಸುತ್ತಿವೆ. ಅದರಲ್ಲೂ ತಮ್ಮ ಮೊದಲ ಸಿನಿಮಾ ‘ಮಠ’ದ ಮೂಲಕ ಒಂದಷ್ಟು ಭರವಸೆ ಹುಟ್ಟಿಸಿದವರು ಗುರುಪ್ರಸಾದ್‌. ಹೀಗಾಗಿಯೇ ಅವರ ಸುತ್ತ ನಿರೀಕ್ಷೆಗಳು. ಅವರ ಹೊಸ ಚಿತ್ರ ‘ಎದ್ದೇಳು ಮಂಜುನಾಥ’ ಯಾವಾಗ ಬರುತ್ತೆ ಅನ್ನೋ ಕಾತುರ ಪ್ರೇಕ್ಷಕರಿಗೆ. ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿ ಮಾಡಬಾರದು ಎಂಬ ಹಂಬಲ ಗುರು ಅವರಿಗೆ.

ಈ ಗುರುಪ್ರಸಾದ್‌, ಕನಕಪುರದವರು. ಅವರ ತಂದೆ ರಾಮಚಂದ್ರಪ್ಪ. ಅವರು ಶಾರದಾ ದೇವಿಯನ್ನು ಪೂಜಿಸುತ್ತಿದ್ದ ಅರ್ಚಕರು. ಗುರು ಅವರ ತಾಯಿಯ ಹೆಸರು ಶಾರದಾ! ಅಮ್ಮನ ಆಶೀರ್ವಾದವೋ, ಅಪ್ಪ ಪೂರ್ಜಿಸುತ್ತಿದ್ದ ಶಾರದಾ ಮಾತೆಯ ದಯೆಯೋ, ಚಿಕ್ಕಂದಿನಿಂದಲೂ ಪುಸ್ತಕಗಳತ್ತ ವಿಶೇಷ ಆಸಕ್ತಿ. ಹೀಗಾಗಿಯೇ ಅವರಲ್ಲೊಬ್ಬ ಕತೆಗಾರ ರೂಪುಗೊಂಡ. ನಿರ್ದೇಶಕ ಜೀವಪಡೆದ.

ಗುರು, ಜಗ್ಗೇಶ್‌ರ ಉಗ್ರ ಅಭಿಮಾನಿ. 9ನೇ ತರಗತಿ ಓದುವಾಗಲೇ, ಜಗ್ಗೇಶ್‌ ಚಿತ್ರೋತ್ಸವವನ್ನು ಸ್ನೇಹಿತರ ಸಹಕಾರದೊಂದಿಗೆ ಆಯೋಜಿಸಿದ್ದರು. ಗುರು ಒಳಗಿನ ಶಕ್ತಿ-ಸಾಮರ್ಥ್ಯವನ್ನು ಅಂದಾಜಿಸಿದ್ದ ಜಗ್ಗೇಶ್‌, ತಮ್ಮ ನೂರನೇ ಚಿತ್ರ ನಿರ್ದೇಶಿಸಲು ಗ್ರೀನ್‌ ಸಿಗ್ನಲ್‌ ನೀಡಿದರು. ಆಮೇಲಿನ ಕತೆ ಎಲ್ಲರಿಗೂ ಗೊತ್ತಿದೆ. ‘ಮಠ’ ಅನ್ನೋ ಚಿತ್ರ ಮಾಸ್‌ ಮತ್ತು ಕ್ಲಾಸ್‌ ಜನರನ್ನು ತಲುಪಿದ ಕತೆ, ಯಾರಿಗೆ ಗೊತ್ತಿಲ್ಲ.

‘ದಟ್ಸ್‌ ಕನ್ನಡ’ ಜೊತೆ ಮನಬಿಚ್ಚಿ ಮಾತನಾಡಿದ ಗುರುಪ್ರಸಾದ್‌ ಹೇಳಿದ್ದಿಷ್ಟು...

  • ನಿಮಗೂ ಸಿನಿಮಾಗೂ ಹೇಗೆ ನಂಟು? ನಿರ್ದೇಶಕರಾಗುವ ಮುನ್ನ ಏನ್‌ ಮಾಡ್ತಾಯಿದ್ರಿ?
1993ರಲ್ಲಿ ಬೆಂಗಳೂರಿಗೆ ಬಂದೆ. ಮೊದಲು ಟಿ.ಎನ್‌.ಸೀತಾರಾಂ ಅವರ ‘ಮನ್ವಂತರ’ ಧಾರಾವಾಹಿಯಲ್ಲಿ ಕೆಲಸ ಮಾಡಿದೆ. ನಂತರ ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ಮರ್ಮ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ನನಗೆ ಮೊದಲಿನಿಂದಲೂ ಬಣ್ಣದ ಪ್ರಪಂಚದ ಬಗೆಗೆ ಆಕರ್ಷಣೆ. ‘ಗುರು ಚೆನ್ನಾಗಿದ್ದರೆ ದಾರಿ ಚೆನ್ನಾಗಿರುತ್ತದೆ’ ಎಂಬ ನಂಬಿಕೆ ನನ್ನದು. ಹೀಗಾಗಿ ಅಂತಹವರ ಬಳಿಯೇ ಕೆಲಸ ಮಾಡಿದೆ.

ಹಿಂದೂಸ್ತಾನ್‌ ಲೀವರ್‌ ಲಿಮಿಟೆಡ್‌ನಲ್ಲಿ(ಎಚ್‌ಎಲ್‌ಎಲ್‌) ಸಂಶೋಧನಾ ವಿಭಾಗದಲ್ಲಿ ಸಹಾಯಕನಾಗಿ 5ವರ್ಷ ಸೇವೆ ಮಾಡಿದೆ. ಅಲ್ಲಿ ನಾನು ಕೆಲಸ ಬಿಟ್ಟಾಗ ನನಗೆ 24,500 ರೂಪಾಯಿ ಸಂಬಳ ಬರುತ್ತಿತ್ತು. ಆದರೂ ನನ್ನ ಕನಸು ಬೇರೆಯೇ ಇತ್ತು. ಚಿತ್ರ ಪ್ರಪಂಚದಲ್ಲಿ ನನ್ನವೇ ಆದ ಒಳ್ಳೆ ಚಿತ್ರಗಳನ್ನು ಪ್ರತಿಷ್ಠಾಪಿಸಲೇ ಬೇಕು ಎಂಬ ಉದ್ದೇಶದಿಂದ, ಕೆಲಸ ಬದಲಿಸಿದೆ. ‘ಮಠ’ ಚಿತ್ರಕ್ಕೆ ಕೈಹಾಕಿದೆ.

  • ‘ಮಠ’ ಮಾಡಿದಾಗ ನಿಮ್ಮ ಮನಸ್ಸಿನಲ್ಲಿ ಏನಿತ್ತು? ಆ ಕಲ್ಪನೆ ಬಂದದ್ದು ಹೇಗೆ?
60ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಮಠ’ ಚಿತ್ರದ್ದು ಕ್ರಾಂತಿದಾಯಕ ಸಂಗತಿ. ಅದರ ವೈಶಿಷ್ಟ್ಯಗಳು ಹತ್ತಾರು. ಸಿನಿಮಾವನ್ನು ಕೂತು ನೋಡಿದ ಸ್ವಾಮೀಜಿ ಮನದಲ್ಲಿ ಅಲ್ಲೋಲ ಕಲ್ಲೋಲವಾಗಬೇಕು. ನಾಡಿನ ಎಲ್ಲಾ ಮಠಗಳ ಸುತ್ತಿದೆ. ಸ್ವಾಮೀಜಿಗಳ ಭೇಟಿ ಮಾಡಿದೆ. ಮಠಗಳಲ್ಲಿ ಶೇ.95ರಷ್ಟು ಕಳ್ಳರು ತುಂಬಿದ್ದಾರೆ ಎಂಬುದು ಮನವರಿಕೆಯಾಯಿತು. ನನ್ನ ಸಂಶೋಧನೆಯನ್ನು ವಿಡಂಬನಾ ರೂಪದಲ್ಲಿ ಚಿತ್ರ ಮಾಡಿದೆ. ಈ ಸಿನಿಮಾದಲ್ಲಿ ಯಾವ್ಯಾವ ಸ್ವಾಮೀಜಿ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತು.

ಮಠದ ವೈಶಿಷ್ಟ್ಯಗಳ ಬಗ್ಗ ಹೇಳುವುದಾದರೆ, ಜಗ್ಗೇಶ್‌ರ 100ನೇ ಚಿತ್ರವನ್ನು ದಾಖಲೆಯ ಮೈಲಿಗಲ್ಲಾಗಿಸುವ ನನ್ನ ಪ್ರಯತ್ನ ಫಲಿಸಿದೆ. ಚಿತ್ರದ ಜಾಹೀರಾತು, ಪ್ರಚಾರ ಕಲೆ ಎಲ್ಲವೂ ಭಿನ್ನ. ಪತ್ರಿಕೆಯಲ್ಲಿ ಜಾಹೀರಾತುಗಳನ್ನು ಓದುಗರು ಗಂಭೀರವಾಗಿ ಗಮನಿಸುವುದಿಲ್ಲ. ಆದರೆ ‘ಮಠ’ ಚಿತ್ರದ ಜಾಹೀರಾತುಗಳನ್ನು ನೋಡಿ ಎರಡು ನಿಮಿಷ ನಗ್ತಾಯಿದ್ದರು, ಮಾತಾಡುತ್ತಿದ್ದರು. ಅದೇ ಸಾರ್ಥಕತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X