ರಿಯಲ್ ಸ್ಟಾರ್ ಉಪೇಂದ್ರ ಹೊಸ ಚಿತ್ರಕ್ಕೆ ಶ್ರಿಯಾ ಸರನ್
ಸೂಪರ್ ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಏನು ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಈಗ ಅವರ ಕಾತರಕ್ಕೆ ತೆರೆ ಬೀಳುವ ಸಮಯ ಬಂದಿದೆ. ಉಪೇಂದ್ರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ಈ ಬಾರಿ ಅವರು ಆಕ್ಷನ್, ಕಟ್ ಹೇಳದೆ ಕೇವಲ ನಟನೆಗಷ್ಟೇ ಸೀಮಿತರಾಗಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ಯಶಸ್ವಿ ಚಿತ್ರಗಳ ಸರದಾರ ಎಂದೇ ಖ್ಯಾತರಾದ ಪಿ ವಾಸು ಹೊತ್ತಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕೊನೆಯ ಚಿತ್ರ 'ಆಪ್ತ ರಕ್ಷಕ' ಚಿತ್ರವನ್ನು ನಿರ್ಮಿಸಿ ಹೊಸ ದಾಖಲೆಗೆ ಕಾರಣರಾದ ಕೃಷ್ಣ ಪ್ರಜ್ವಲ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೇ.15ರಂದು ಚಿತ್ರ ಬೆಂಗಳೂರಿನಲ್ಲಿ ಸೆಟ್ಟೇರಲಿದೆ. ಕತೆ ಮತ್ತು ಚಿತ್ರಕತೆಯನ್ನು ವಾಸು ಅವರೇ ಹೆಣೆದಿದ್ದಾರೆ. ಆದರೆ ಕತೆಯ ಎಳೆಯನ್ನೂ ಎಲ್ಲೂ ಬಿಟ್ಟುಕೊಡದೆ ಕುತೂಹಲವನ್ನು ಕಾದಿರಿಸಿದ್ದಾರೆ ನಿರ್ದೇಶಕರು.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ದಕ್ಷಿಣ ಭಾರತದ ಖ್ಯಾತ ತಾರೆಯನ್ನು ಕರೆತರುವುದಾಗಿ ಕೃಷ್ಣ ಪ್ರಜ್ವಲ್ ಹೇಳಿದ್ದಾರೆ. ಒಬ್ಬರಂತೂ ತಮಿಳು, ತೆಲುಗು ಚಿತ್ರರಂಗದ ಗ್ಲಾಮರ್ ಬೆಡಗಿ ಶಿಯಾ ಸರನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಮತ್ತೊಬ್ಬ ಬೆಡಗಿ ಯಾರು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಉಪೇಂದ್ರ ಅವರ ಬಹುತೇಕ ಚಿತ್ರಗಳ ಕಾಯಂ ಸದಸ್ಯ ಗುರು ಕಿರಣ್ ಸಂಗೀತ ಚಿತ್ರಕ್ಕಿರುತ್ತದೆ.


Click it and Unblock the Notifications











