ಜೀ ಕನ್ನಡದಲ್ಲಿ ಮತ್ತೊಮ್ಮೆ 'ಬಾಳೇ ಬಂಗಾರ'
ಬೆಂಗಳೂರು : ಕರ್ನಾಟಕದ ಮಹಿಳಾ ಮಣಿಗಳಿಗೆಲ್ಲ ಸಂತಸದ ಸುದ್ದಿ ! ಜೀ ಕನ್ನಡದ ಪ್ರಸಿದ್ಧ ಕಾರ್ಯಕ್ರಮ 'ಬಾಳೇ ಬಂಗಾರ' ಮತ್ತೆ ಕಿರುತೆರೆಯ ಮೇಲೆ ಮೂಡಿ ಬರಲಿದೆ. ಕರ್ನಾಟಕದ ಪ್ರಸಿದ್ಧ ಕಿರುತೆರೆ ಮತ್ತು ಚಿತ್ರತಾರೆಗಳ ತಂಡ ಈ ಬಾರಿ ಬಂಗಾರ ಗೆಲ್ಲುವ ಆಟದಲ್ಲಿ ಭಾಗವಹಿಸಲಿದೆ. ಈ ಕಾರ್ಯಕ್ರಮದ ನಿರೂಪಕಿಯಾಗಿ ಖ್ಯಾತತಾರೆ ಅನು ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರೆ.
ಫೆಬ್ರವರಿ 14ರಿಂದ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 7ರಿಂದ 8 ಗಂಟೆಯವರೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮದ ಪ್ರತಿ ಕಂತಿನಲ್ಲಿ ಎರಡು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.
ಪ್ರತಿ ಕಂತಿನಲ್ಲಿ ಎಂಟು ಸುತ್ತುಗಳಿದ್ದು ಮನರಂಜನಾತ್ಮಕವಾಗಿ ನಿರ್ಮಿಸಲಾಗಿದೆ. ತಂಡದ ಸದಸ್ಯರ ಸಾಮಾನ್ಯ ಜ್ಞಾನ ಪರೀಕ್ಷಿಸಲು 'ಜೈ ಕರ್ನಾಟಕ', ವಿವಿಧ ಕ್ಷೇತ್ರದಲ್ಲಿಯ ಪ್ರಸಿದ್ಧರ ಕುರಿತಾದ 'ಇವರು ಯಾರು ಬಲ್ಲಿರೇನು?', ಹಳೆಯ ಚಲನಚಿತ್ರದ ಹಾಡುಗಳ 'ಹಾಡು ಹಳೆಯದಾದರೇನು' ಮುಂತಾದವು ಕೆಲವು ಸುತ್ತುಗಳಾಗಿವೆ.
ಈ ಬಾರಿಯ 'ಬಾಳೇ ಬಂಗಾರ' ಕಾರ್ಯಕ್ರಮವು ಒಟ್ಟಾರೆ ಮೂವತ್ತೆರಡು ತಂಡಗಳನ್ನು ಹೊಂದಿದ್ದು 32 ಕಂತುಗಳಲ್ಲಿ ಪ್ರಸಾರವಾಗಲಿದೆ. ಪ್ರತಿ ಕಂತಿನಲ್ಲಿ ಎರಡು ತಂಡಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಜೀ ಕನ್ನಡದ ಪ್ರಸಿದ್ಧ ಕಾರ್ಯಕ್ರಮ 'ಬಾಳೇ ಬಂಗಾರ' ಈ ಹಿಂದೆ ಪ್ರಾರಂಭವಾದಾಗ ಕಿರುತೆರೆಯಲ್ಲಿ ಸಂಚಲನ ಮೂಡಿಸಿತ್ತು. ಈ ಬಾರಿ ಕರ್ನಾಟಕದ ಪ್ರಸಿದ್ಧರನ್ನು ಕಿರುತೆರೆಯ ಈ ಆಟಕ್ಕೆ ಕರೆಸುವ ಮೂಲಕ ಜೀ ಕನ್ನಡ ಇನ್ನೊಂದು ಹೊಸ ಹೆಜ್ಜೆಗೆ ಮುನ್ನುಡಿ ಬರೆಯುತ್ತಲಿದೆ ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.
ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರ ಪತ್ನಿ, ವಿಜಯಲಕ್ಷ್ಮಿ ಸಿಂಗ್, ಎಂ.ಡಿ ಪಲ್ಲವಿ, ನಿರ್ಮಾಪಕ ಮದನ್ ಮಲ್ಲು ಅವರ ಪತ್ನಿ ಮುಂತಾದವರು ಸ್ಪರ್ಧೆಯಲ್ಲಿದ್ದಾರೆ. 'ಬಾಳೇ ಬಂಗಾರ' ಸ್ಪರ್ಧೆಗೆ ಒಪ್ಪಿಕೊಂಡಿರುವ ಇತರ ಪ್ರಸಿದ್ಧರು ಯಾರು ಎಂಬುದನ್ನು ಗುರುವಾರ ರಾತ್ರಿ 8ರಿಂದ 9ಕ್ಕೆ ಪ್ರಸಾರವಾಗುವ ಪ್ರಥಮ ಕಂತಿನಲ್ಲಿ ನೋಡಬಹುದಾಗಿದೆ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications