ದುನಿಯಾ ವಿಜಯ್ ಪ್ರಾಣಾಪಾಯದಿಂದ ಪಾರು
ನಟ ದುನಿಯಾ ವಿಜಯ್ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆಯಲ್ಲಿ ಭರದಿಂದ ಸಾಗುತ್ತಿರುವ 'ಚಂಡ್ಯ' ಚಿತ್ರದ ಸಾಹಸ ಚಿತ್ರೀಕರಣ ವೇಳೆ ಈ ಘಟನೆ ಭಾನುವಾರ (ಜೂ.12) ಸಂಭವಿಸಿದೆ. ಈ ಒಂದು ಸಾಹಸ ಸನ್ನಿವೇಶದ ವೇಳೆ ಒಂಚೂರು ಮೈಮರೆತ್ತಿದ್ದರೂ ವಿಜಯ್ ತಲೆ ಅಥವಾ ಬೆನ್ನು ಮೂಳೆ ಮುರುದುಹೋಗುವ ಸಂಭವವಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ವಿಷಯ ಇಷ್ಟು ಸೀರಿಯಸ್ ಆಗಿದ್ದರೂ ದುನಿಯಾ ವಿಜಯ್ ಮಾತ್ರ ಹಗುರವಾಗಿ ತೆಗೆದುಕೊಂಡಿದ್ದಾರೆ. "ಚಿತ್ರೀಕರಣದ ವೇಳೆ ಸಾಕಷ್ಟು ಹೊಡೆತ ತಿಂದಿದ್ದೀನಿ. ಇದು ನನಗೆ ಅಭ್ಯಾಸವಾಗಿ ಹೋಗಿದೆ. ಈಗಲೂ ಕಾಲಿಗೆ ಪೆಟ್ಟುಬಿದ್ದು ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಚಿತ್ರೀಕರಣ ನಿಲ್ಲಬಾರದು ಪಾಲ್ಗೊಂಡಿದ್ದೇನೆ" ಎಂದಿದ್ದಾರೆ ವಿಜಯ್.
ಮೂಲಗಳ ಪ್ರಕಾರ, ವಿಜಯ್ ಎಡಗಾಲಿಗೆ ಐದು ಹೊಲಿಗೆ ಹಾಕಲಾಗಿದೆ. ಆದರೂ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಸದ್ಯಕ್ಕೆ ನೋವು ನಿವಾರಕ ತೆಗೆದುಕೊಂಡಿದ್ದೇನೆ. ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಿದರೆ ನಿರ್ಮಾಪಕ ನೋವು ಏನೂ ಎಂಬುದು ನನಗೆ ಗೊತ್ತು ಎಂದಿದ್ದಾರೆ ವಿಜಯ್. ಅಂದಹಾಗೆ 'ಭೀಮಾ ತೀರದಲ್ಲಿ' ಚಿತ್ರಕ್ಕೆ 'ಚಂಡ್ಯ' ಎಂದು ಮರುನಾಮಕರಣ ಮಾಡಲಾಗಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











