ಈ ವಾರ ಕೃಷ್ಣನ್ ಮ್ಯಾರೇಜ್; ಮಿಸ್ ಮಾಡ್ಕೋ ಬೇಡಿ
ಇದೇ ಶುಭ ಶುಕ್ರವಾರ (ಜು.15) ಕೃಷ್ಣನ್ ಮ್ಯಾರೇಜ್ ನಡೆಯಲಿದೆ.ಕನ್ನಡ ಚಿತ್ರಪ್ರೇಮಿಗಳು ಉದಾರ ಮನಸ್ಸಿನಿಂದ ಬಂದು ಆಶೀರ್ವಾದ ಮಾಡಿದರೆ "ಕೃಷ್ಣನ್ ಮ್ಯಾರೇಜ್ ಸ್ಟೋರಿ" ಸಕ್ಸಸ್ ಆಗಲಿದೆ. ಬೆಂಗಳೂರಿನ ಸಾಗರ್, ವೀರೇಶ್ ಸೇರಿದಂತೆ ಪಿವಿಆರ್, ಐನಾಕ್ಸ್ ಚಿತ್ರಮಂದಿರಗಳಲ್ಲಿ ಕೃಷ್ಣನ್ ಮ್ಯಾರೇಜ್ ಸ್ಟೋರಿ ಬಿಡುಗಡೆಯಾಗುತ್ತಿದೆ.
ಇಷ್ಟಕ್ಕೂ ಈ ಚಿತ್ರದಲ್ಲಿ ಅಂಥಹದ್ದೇನಿದೆ. ಯುವಕ, ಯುವತಿಯರ ಜೀವನಕ್ಕೆ ಬೇಕಾದಂತಹ ಒಂದಷ್ಟು ಅಂಶಗಳಿವೆ. ಅವಿಭಕ್ತ ಕುಟುಂಬದ ಬಾಂಧವ್ಯ,ಸಂಬಂಧಗಳ ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಕೃಷ್ಣನ್ ಮ್ಯಾರೇಜ್ ಸ್ಟೋರಿ ಕೇಳಿದವರಿಗೆ ಹೊಸ ಅನುಭವ ಗ್ಯಾರಂಟಿ ಎಂದಿದ್ದಾರೆ ಚಿತ್ರದ ನಾಯಕ ನಟ ಅಜಯ್ ರಾವ್.
ನನ್ನ ರಿಯಲ್ ಲೈಫಿಗೆ ತೀರಾ ಹತ್ತಿರವಾದ ಪಾತ್ರ. ತುಂಬಾ ತುಂಟಾಟ ಮಾಡಿಕೊಂಡು ಜಾಲಿಯಾಗಿರುವ ಹುಡುಗಿ ನಾನು. ಚಿತ್ರದ ಕೊನೆಯ ತನಕ ಸಖತ್ ಎಂಜಾಯ್ ಮಾಡಬಹುದು. ಖಂಡಿತ ಮಿಸ್ ಮಾಡ್ಕೋಬೇಡಿ ಎಂದಿದ್ದಾರೆ ಚಿತ್ರದ ನಾಯಕಿ ನಿಧಿ ಸುಬ್ಬಯ್ಯ.
ದೀಕ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್ಕುಮಾರ್ ನಿರ್ಮಿಸಿರುವ ಚಿತ್ರ 'ಕೃಷ್ಣನ್ ಮ್ಯಾರೇಜ್ ಸ್ಟೋರಿ'. ನೂತನ್ ಉಮೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕ ಅಜೇಯ್ರಾವ್. ನಿಧಿಸುಬ್ಬಯ್ಯ ನಾಯಕಿ. ಚಿತ್ರದ ತಾರಾಬಳಗದಲ್ಲಿ ಜೈಜಗದೀಶ್, ವಿನಯಾಪ್ರಸಾದ್, ಸಂಗೀತ, ಸುರೇಶ್ಮಂಗಳೂರು, ಬಾಲರಾಜ್, ಜಯಲಕ್ಷ್ಮೀ, ಭಾರ್ಗವಿನಾರಾಯಣ್, ಸ್ವಯಂವರಚಂದ್ರು, ನಾಗೇಂದ್ರ ಶಾ ಮುಂತಾದವರಿದ್ದಾರೆ.
ಶೇಖರ್ಚಂದ್ರರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತವಿದೆ. ಶ್ರೀ ಸಂಕಲನ, ರವಿವರ್ಮ ಸಾಹಸ, ಮಂಜು ಮಾಂಡವ್ಯ ಸಂಭಾಷಣೆ ಹಾಗೂ ಚಂಪಕಧಾಮ ಬಾಬು ಅವರ ನಿರ್ಮಾಣನಿರ್ವಹಣೆ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಚಿತ್ರಕ್ಕಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











