ರಾಷ್ಟ್ರಪತಿ ಹುದ್ದೆ : ರೇಸ್ನಲ್ಲಿ ನಟ ಅಮಿತಾಭ್ ಬಚ್ಚನ್
ನವದೆಹಲಿ : ರಾಷ್ಟ್ರಪತಿ ಅಬ್ದುಲ್ ಕಲಾಂ ಅಧಿಕಾರಾವಧಿ ಇನ್ನೂ ಐದು ತಿಂಗಳು ಬಾಕಿಯಿರುವಾಗಲೇ, ಆ ಸ್ಥಾನಕ್ಕೆ ಸ್ಪರ್ಧೆ ಆರಂಭವಾಗಿದ್ದು, ಬಾಲಿವುಡ್ ಬಾದ್ಷಾ ಅಮಿತಾಭ್ ಬಚ್ಚನ್ ಹೆಸರು ಕೇಳಿಬಂದಿದೆ.
ಈಗಾಗಲೇ ಕಾಂಗ್ರೆಸ್ ನಾಯಕರಾದ ಡಾ.ಕರಣ್ಸಿಂಗ್, ಸುಶೀಲ್ಕುಮಾರ್ ಸಿಂಧೆ, ಹಾಲಿ ರಾಷ್ಟ್ರಪತಿ ಹಾಗೂ ಬಿಜೆಪಿ ನಾಯಕ ಭೈರೋನ್ಸಿಂಗ್ ಶೇಖಾವತ್, ಸಿಪಿಐ(ಎಂ)ನ ಹಿರಿಯ ಸಂಸದ ಹಾಗೂ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರ ಹೆಸರುಗಳೂ ಕೇಳಿ ಬಂದಿವೆ.
ಆದರೆ ಆಶ್ಚರ್ಯಕರ ರೀತಿಯಲ್ಲಿ ಕೆಲವರು, ಹಿರಿಯ ಹಿಂದಿ ಚಿತ್ರನಟ ಅಮಿತಾಭ್ ಬಚ್ಚನ್ ಅವರ ಹೆಸರು ತೇಲಿ ಬಿಟ್ಟಿದ್ದಾರೆ. ಸಮಾಜವಾದಿ ಪಕ್ಷ, ತೆಲುಗುದೇಶಂ ಪಕ್ಷ, ಎಐಎಡಿಎಂಕೆ ಮತ್ತು ಅಸ್ಸಾಂ ಗಣ ಪರಿಷತ್ ಪಕ್ಷಗಳನ್ನೊಳಗೊಂಡ ಸ್ವಯಂಘೋಷಿತ ತೃತೀಯ ರಂಗದಲ್ಲಿ ಈ ಕುರಿತು ಪಿಸುಮಾತುಗಳು ಆರಂಭಗೊಂಡಿವೆ. ಸಮಾಜವಾದಿ ಪಕ್ಷದಲ್ಲಿರುವ ಅಮಿತಾಭ್ ಬಚ್ಚನ್ ಸ್ನೇಹಿತರು ಈ ಬಗೆಯ ಮಾತು ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಾನು ರಾಜಕೀಯಕ್ಕೆ ಸರಿ ಹೊಂದುವುದಿಲ್ಲ ಎಂದು ಅಮಿತಾಭ್ ಹೇಳುತ್ತಲೇ ಬಂದಿದ್ದರೂ ಈ ಬಗೆಯ ಮಾತುಗಳು ಕೇಳಿಬರುತ್ತಿರುವುದು ಕುತೂಹಲ ಮೂಡಿಸಿವೆ.
ಕಲಾಂ ಮುಂದುವರಿಯುವರೇ...? : ಅಬ್ದುಲ್ ಕಲಾಂ ಎರಡನೇ ಅವಧಿಗೆ ಮುಂದುವರಿಯುವ ಆಸಕ್ತಿ ಹೊಂದಿಲ್ಲವಾದರೂ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ಡಿಎ) ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮನಸ್ಸು ಬದಲಿಸಿ ಅವರು ಎರಡನೇ ಅವಧಿಗೆ ಮುಂದುವರಿಯಲಿದ್ದಾರೆ ಎಂದು ಕೆಲವು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.
(ಏಜನ್ಸೀಸ್)


Click it and Unblock the Notifications