ಕಾಯಾ‘ಭಗವಾನ್’ಎಂದ ಗೋವಿಂದು
'ಲಾಲಿ ಹಾಡು" ಚಿತ್ರ ಪ್ರಶಸ್ತಿಯನ್ನೇನೋ ತಂದುಕೊಟ್ಟಿತು, ಜೊತೆಗೆ ವಿವಾದವನ್ನೂ . ಪ್ರಶಸ್ತಿ ಹಾಗೂ ವಿವಾದದ ಮಾತು ಒತ್ತಟ್ಟಿಗಿರಲಿ, ಚಿತ್ರಕ್ಕೆ ಖರ್ಚು ಮಾಡಿದ ಕಾಸು ಹುಟ್ಟಲಿಲ್ಲ . ನಿರ್ಮಾಪಕ ಸಾ.ರಾ.ಗೋವಿಂದು ಪಾಲಿಗೆ 'ಲಾಲಿ ಹಾಡು" ಆರ್ಥಿಕವಾಗಿ ಅಹಿತ.
ಗೋವಿಂದು ಈಗ ಚೇತರಿಸಿಕೊಂಡಿದ್ದಾರೆ. ಹೊಸ ಕನಸುಗಳೊಂದಿಗೆ ಚಿತ್ರ ನಿರ್ಮಾಣದಲ್ಲಿ ಮರಳಿ ತೊಡಗಿದ್ದಾರೆ. ಸದ್ಯಕ್ಕೆ ನಟನೆಯ ಹುಚ್ಚನ್ನು ಕಳಕೊಂಡಿರುವ ಸಾ.ರಾ.ಗೋವಿಂದು, 'ಭಗವಾನ್" ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದರ್ಶನ್ ಹಾಗೂ ಭಾವನಾ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ.
ಲಾಲಿ ಹಾಡು ಚಿತ್ರದ ನಿರ್ದೇಶಕ ಎಚ್.ವಾಸು 'ಭಗವಾನ್" ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. 'ಭಗವಾನ್" ಕಲಾತ್ಮಕ ಚಿತ್ರವಲ್ಲ ; ಹದಿನಾರಾಣೆ ಕಮರ್ಷಿಯಲ್ ಚಿತ್ರ ಎನ್ನುತ್ತಾರೆ ವಾಸು. ಏಕೆಂದರೆ ನಿರ್ಮಾಪಕರು ಬದುಕಬೇಕಲ್ಲ ಸ್ವಾಮಿ !
ಭಗವಾನ್ ಚಿತ್ರದ ಚಿತ್ರೀಕರಣದ ಷೆಡ್ಯೂಲ್ ಪಕ್ಕಾ ಆಗಿದೆ. 45 ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ. 15 ದಿನಗಳ ಕಾಲ ಹೈದರಾಬಾದ್ನಲ್ಲಿ ಚಿತ್ರೀಕರಣ. ಪೊಲ್ಲಾಚಿ ಹಾಗೂ ಇನ್ನಿತರ ಸುಂದರ ಹೊರಾಂಗಣದಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಉದ್ದೇಶವಿದೆ ಎನ್ನುತ್ತಾರೆ ವಾಸು. ನಿರ್ಮಾಪಕ ಗೋವಿಂದು ಯಾವುದಕ್ಕೂ ಬೇಡ ಎಂದಿಲ್ಲ . ಅವರದೊಂದೇ ಆಸೆ- ಚಿತ್ರ ಚೆನ್ನಾಗಿ ಬರಬೇಕು ; ಆ ಚಿತ್ರವನ್ನು ಪ್ರೇಕ್ಷಕರು ನೋಡಬೇಕು.


Click it and Unblock the Notifications