4ನೇ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಅಣ್ಣಾವ್ರ ಸಂಸ್ಮರಣೆ
ಕನ್ನಡ ಕಣ್ಮಣಿ ಕೊನೆಯುಸಿರೆಳೆದ ಸುದ್ದಿ ಅಮೆರಿಕನ್ನಡಿಗರನ್ನೂ ದಿಗ್ಭ್ರಮೆಗೊಳಿಸಿದೆ. ‘ಬಂಗಾರದ ಮನುಷ್ಯ’ ಇನ್ನಿಲ್ಲ ಎಂದು ಶೋಕತಪ್ತರಾದವರೇ ಎಲ್ಲರೂ. ಇಲ್ಲಿಯವರಿಗೆ ಡಾ।ರಾಜ್ ನೆನಪು ಎಂದರೆ ತಂತಮ್ಮ ಬಾಲ್ಯದ ನೆನಪು, ಡಾ।ರಾಜ್ ಚಿತ್ರಗಳನ್ನು ನೋಡಿದ, ಹಾಡುಗಳನ್ನು ಕೇಳಿದ ಸವಿನೆನಪು.
ವಾಷಿಂಗ್ಟನ್ ಡಿಸಿ ಪ್ರದೇಶದ ‘ಕಾವೇರಿ’ ಕನ್ನಡ ಸಂಘವು ಇದೇ ಭಾನುವಾರ (ಏ.16) ಡಾ।ರಾಜ್ಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಸಂತಾಪಸಭೆಯೊಂದನ್ನು ಏರ್ಪಡಿಸಿದೆ.
ಕಾವೇರಿ ಕನ್ನಡ ಸಂಘವು ‘ಅಕ್ಕ’ ಸಹಯೋಗದೊಂದಿಗೆ ಈವರ್ಷ ಸೆಪ್ಟೆಂಬರ್ನಲ್ಲಿ ಹಮ್ಮಿಕೊಂಡಿರುವ 4ನೇ ‘ಅಕ್ಕ ವಿಶ್ವಕನ್ನಡ ಸಮ್ಮೇಳನ’ದಲ್ಲೂ ಅಗಲಿದ ಅಣ್ಣಾವ್ರ ಸ್ಮರಣೆಯನ್ನು ಅರ್ಥಪೂರ್ಣವಾಗಿ ಮಾಡಲು ನಿರ್ಧರಿಸಿದೆ.
ಸಮ್ಮೇಳನದ ಮುಖ್ಯ ಸಭಾಂಗಣವನ್ನು ‘ಡಾ।ರಾಜಕುಮಾರ್ ಸಭಾಂಗಣ’ ಎಂದು ಹೆಸರಿಸುವುದು, ಡಾ।ರಾಜ್ ಅವರ ಆಯ್ದ ಕೆಲವು ಚಲನಚಿತ್ರಗಳ ಚಿತ್ರೋತ್ಸವ, ಡಾ।ರಾಜ್ ಬಣ್ಣದ ಬದುಕನ್ನು ಕುರಿತ ವಿಚಾರ ಸಂಕಿರಣ, ಸಮ್ಮೇಳನದ ಆಹ್ವಾನಿತರಾಗಿರುವ ಡಾ। ಪಿ.ಬಿ.ಶ್ರೀನಿವಾಸ್ ಅವರಿಂದ ಸಮ್ಮೇಳನ ಉದ್ಘಾಟನೆ ಮುಂತಾದವುಗಳನ್ನು ಸಮ್ಮೇಳನ ಸಂಚಾಲನಾ ಸಮಿತಿಯು ಯೋಜಿಸುತ್ತಿದೆ.
ಪುನೀತ್ ರಾಜಕುಮಾರ್ ಅವರು ಸಮ್ಮೇಳನದ ಅತಿಥಿಗಳಲ್ಲೊಬ್ಬರಾಗಿರುತ್ತಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications