ಅಭಿಮಾನಿಗಳ ಸಮ್ಮುಖದಲ್ಲಿ ಹ್ಯಾಟ್ರಿಕ್ ಹೀರೋ ನಲವತ್ತೊಂದನೇ ಹುಟ್ಟುಹಬ್ಬ
'ಅಭಿಮಾನಿಗಳ ಪ್ರೀತಿಗೆ ನಾನು ಋಣಿ" 'ವರುಣನ ಕೃಪೆಗೂ ನಾನು ಋಣಿ"
41 ನೇ ಹುಟ್ಟುಹಬ್ಬದ ಸಡಗರದಲ್ಲಿದ್ದ ಶಿವರಾಜ್ಕುಮಾರ್ ಅಭಿಮಾನಿಗಳ ಪ್ರೀತಿಯ ಮಳೆಯಲ್ಲಿ ತೋಯುತ್ತಿದ್ದರು. ಅದಕ್ಕೆ ಸ್ವಲ್ಪ ಹೊತ್ತು ಮುಂಚೆಯಷ್ಟೇ ಮಳೆ ಸುರಿದಿತ್ತು . ಎಲೆಯ ಮೇಲಿನ ಹನಿ ಮುತ್ತುಗಳು ಮಣ್ಣಿಗಿಳಿಯುತ್ತಿದ್ದವು. ಅಭಿಮಾನಿಗಳಿಗೂ, ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಮಳೆರಾಯನಿಗೂ ಶಿವಣ್ಣ ಏಕಮನದಿಂದ ಕೃತಜ್ಞತೆ ಅರ್ಪಿಸಿದರು. ಪಕ್ಕದಲ್ಲಿ ಪತ್ನಿ ಗೀತಾ ಮುಗುಳ್ನಗುತ್ತಿದ್ದರು.
ಅಭಿಮಾನಿಗಳು ತೋರಿದ ಪ್ರೀತಿ ಮತ್ತು ವಿಶ್ವಾಸವನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ . 'ಸ್ಟಾರ್" ಎಂದು ನಾನಿಂದು ಕರೆಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳ ಪ್ರೀತಿ-ಹಾರೈಕೆಯೇ ಕಾರಣ. ಅಭಿಮಾನಿಗಳ ಶುಭ ಹಾರೈಕೆಯಿಂದ ಹೃದಯ ತುಂಬಿ ಬಂದಿದೆ ಎಂದು ಶಿವಣ್ಣ ಭಾವುಕರಾದರು.
ನಮ್ಮ ಕುಟುಂಬದ ಮೇಲಿನ ಅಭಿಮಾನಿಗಳ ಆಶೀರ್ವಾದ ದೊಡ್ಡದು. ಆ ಪ್ರೀತಿ ವಿಶ್ವಾಸ ಮುಂದೆಯೂ ಹೀಗೇ ಇರಲಿ. ರಾಜ್ ಕುಟುಂಬ ಮಾತ್ರವಲ್ಲ , ಕನ್ನಡ ಚಿತ್ರರಂಗವನ್ನೂ ಇದೇ ರೀತಿ ಪ್ರೋತ್ಸಾಹಿಸಬೇಕು, ಬೆಳೆಸಬೇಕು ಎಂದು ಶಿವರಾಜ್ ಅಭಿಮಾನಿಗಳಿಗೆ ಮನವಿ ಮಾಡಿದರು.
ಅಂದಹಾಗೆ, ಗಾಂಧಿನಗರದ ಶುಭ ದಿನವಾದ ಶುಕ್ರವಾರ (ಜು.12) ಬೆಂಗಳೂರಿನ ವಯ್ಯಾಲಿಕಾವಲ್ನಲ್ಲಿ ನಡೆದ ಈ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಏರ್ಪಡಿಸಿತ್ತು .
ಪರಶುರಾಮ ಚಿತ್ರದಲ್ಲಿ ವರನಟ ಡಾ.ರಾಜ್ಕುಮಾರ್ ಹಾಡಿರುವ 'ನಗು ತಾ ನಗುತಾ ಬಾಳು ನೀನು ನೂರು ವರುಷ" ಗೀತೆಯ ಮೂಲಕ ಶಿವರಾಜ್ಗೆ ಅಭಿಮಾನಿಗಳು ಶುಭ ಕೋರಿದರು. ಒಂದೆಡೆ ಅಭಿಮಾನಿಗಳ ಹರ್ಷೋದ್ಘಾರ, ಇನ್ನೊಂದೆಡೆ ಬೆಳಕು ಚೆಲ್ಲುತ್ತಿದ್ದ ಆಕಾಶ ಬುಟ್ಟಿಗಳು !
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ , 'ಅಪ್ಪು" ಪುನೀತ್ ಶಿವಣ್ಣನಿಗೆ ಶುಭ ಕೋರಿದರು.
ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ಶಿವರಾಜ್ ನಿವಾಸದಲ್ಲಿ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳು ನೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಿಸಿದರು. ಶಿವಣ್ಣನಿಗೆ ಬೆಳ್ಳಿ ಕಿರೀಟ ತೊಡಿಸಿ ಸಂಭ್ರಮಿಸಿದರು.
ಕ್ಯಾನ್ಸರ್ಗೆ ಬಲಿಯಾದ ರಾಜ್ ಅಭಿಮಾನಿ ಅಂಜನಕುಮಾರ್ ಅವರ ಪತ್ನಿ ಮಾಲಾ ಅವರಿಗೆ ಶಿವಣ್ಣ ಒಂದು ಲಕ್ಷ ರುಪಾಯಿ ಬಾಂಡ್ ನೀಡಿದ ಸಮಾಜಮುಖಿ ಕಾರ್ಯಕ್ರಮವೂ ಹುಟ್ಟುಹಬ್ಬದ ಸಂಭ್ರಮದಲ್ಲಿ ಸೇರಿದ್ದುದು ವಿಶೇಷ.


Click it and Unblock the Notifications











