ಕೊಲ್ಲೂರಿನಲ್ಲಿ ಇಳಯರಾಜ ಅವರ ಪುತ್ರಿಯ ಕಲ್ಯಾಣೋತ್ಸವ
ಮಂಗಳೂರು : ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ, ಸಂಗೀತ ನಿರ್ದೇಶಕಿ ಮತ್ತು ನಟಿ ಭಾವತಾರಿಣಿ ಇಳಯರಾಜ ಅವರ ವಿವಾಹ ಮಹೋತ್ಸವ ಸೆ.16ರಂದು ಕೊಲ್ಲೂರಿನಲ್ಲಿ ನೆರವೇರಲಿದೆ.
ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳ ಚಲನಚಿತ್ರಗಳಿಗೆ ಸಂಗೀತ ನೀಡಿ ಪ್ರಖ್ಯಾತರಾಗಿರುವ ಇಳಯರಾಜ ಅವರ ಪುತ್ರಿಯ ವಿವಾಹ ಸಮಾರಂಭಕ್ಕೆ ಉತ್ತರ ಮತ್ತು ದಕ್ಷಿಣ ಭಾರತದ ಸಿನಿ ದಿಗ್ಗಜರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ. ಭಾವತಾರಿಣಿ ಅವರು ಮದುರೈನ ಸಬರಿ ರಾಜನ್ರನ್ನು ವರಿಸಲಿದ್ದಾರೆ.
ಕೊಲ್ಲೂರು ದೇವಸ್ಥಾನದ ಪರಮಭಕ್ತರಾದ ಇಳಯರಾಜ ಇತ್ತೀಚೆಗಷ್ಟೇ ದೇವಿಗೆ 30ಲಕ್ಷ ರೂ. ಮೌಲ್ಯದ ವಜ್ರಸಹಿತವಾದ ಚಿನ್ನದ ಆಭರಣವನ್ನು ಕಾಣಿಕೆಯಾಗಿ ನೀಡಿದ್ದರು. ಇಳಯರಾಜ ಅವರ ಪುತ್ರಿ ಭಾವತಾರಿಣಿ ಶಾಸ್ತ್ರೀಯ ಸಂಗೀತದಲ್ಲಿ ಸಿದ್ಧಹಸ್ತರು. ಸಂಗೀತ ನಿರ್ದೇಶಕಿಯಾಗಿ ಮತ್ತು ನಟಿಯಾಗಿ ಅವರು ಗುರ್ತಿಸಿಕೊಂಡಿದ್ದಾರೆ.
ನಟಿ ಊರ್ವಶಿ ಮತ್ತು ಕೆ.ಮನೋಜ್ ಅವರ ವಿವಾಹ ಮಹೋತ್ಸವ ಕಳೆದ ಕೆಲವು ವರ್ಷಗಳ ಹಿಂದೆ ಕೊಲ್ಲೂರಿನಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಹಚ್ಚಹಸಿರಾಗಿದೆ. ಸ್ಟಾರ್ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿಯ ವಿವಾಹದ ಹಿನ್ನೆಲೆ ಕೊಲ್ಲೂರು ಮತ್ತೆ ರಂಗು ಪಡೆಯಲಿದೆ.
(ಏಜನ್ಸೀಸ್)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications