ಸಿನಿಮಾಗಳಲ್ಲಿನ ಅವಕಾಶದ ಕೊರತೆ.
ಸುಧಾರಾಣಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ !
ಅರೆ. ಇದು ನಿಜಾನಾ.. ಟೀವಿ ಎಂದರೆ ಮಾರು ದೂರ ಹಾರುತ್ತಿದ್ದ ರಾಣಿ ಸೀರಿಯಲ್ನಲ್ಲಿ ನಟಿಸಿಕೊಳ್ಳಲು ಒಪ್ಪಿಕೊಂಡಿರುವುದು ಸತ್ಯವಾ ಎಂದು ಸುದ್ದಿಯ ಜಾಡು ಹಿಡಿದು ಹೋದರೆ, ನೀವು ಕೇಳಿದ ಸುದ್ದಿ ಹದಿನಾರಾಣೆ ನಿಜ ಎನ್ನುತ್ತಾರೆ ಚಿ.ಗುರುದತ್. ರಾಣಿಯನ್ನು ಕಿರುತೆರೆಗೆ ಕರೆ ತರುತ್ತಿರುವವರು ಅವರೇ.
'ಚಂದನದ ಚಿಗುರು' ಸಿನಿಮಾದ ಮೂಲಕ ಸುಧಾರಾಣಿ ಸ್ಯಾಂಡಲ್ವುಡ್ಗೆ ರೀ ಎಂಟ್ರಿ ಪಡೆದರೂ, ನಂತರದಲ್ಲಿ ಅವಕಾಶಗಳೇನೂ ಹುಡುಕಿಕೊಂಡು ಬರಲಿಲ್ಲ . 'ಬುಲೆಟ್' ಎನ್ನುವ ಮಾರಾಮಾರಿ ಚಿತ್ರದಲ್ಲೂ ಸುಧಾರಾಣಿ ಕಾಣಿಸಿಕೊಂಡರೂ, 'ಬುಲೆಟ್ ರಾಣಿ' ಎನ್ನಿಸಿಕೊಂಡಿದ್ದೇ ಲಾಭ. ಬುಲೆಟ್ ಇನ್ನೂ ತೆರೆ ಕಂಡಿಲ್ಲ . ರಾಣಿಗೆ ಹೊಸ ಅವಕಾಶಗಳೂ ಇಲ್ಲ . ಮಗುವನ್ನು ಎತ್ತಿಕೊಂಡು ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವುದಕ್ಕೋ ಏನೋ ಸಿನಿಮಾ ಮಂದಿ ಕಣ್ಣೆತ್ತಿ ನೋಡುತ್ತಿಲ್ಲ. ಹಾಗಾಗಿ ಸುಧಾರಾಣಿ ಟೀವಿ ಮೂಲಕ ಮನೆಮನೆ ತಲುಪಲು ನಿರ್ಧರಿಸಿದ್ದಾರೆ.
ಸುಧಾರಾಣಿಗೆ ಧಾರಾವಾಹಿಯ ಕಥೆ ಒಪ್ಪಿಗೆಯಾಗಿದೆ. ನಾಯಕಿಯಾಗಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ. ಚಿತ್ರಕಥೆಯೂ ಸಿದ್ಧವಾಗಿದೆ ಎನ್ನುತ್ತಾರೆ ಕನ್ನಡ ಚಿತ್ರರಂಗದ ಮರೆಯಬಾರದ ಸಾಹಿತಿ ಚಿ.ಉದಯಶಂಕರ್ ಪುತ್ರ ಚಿ.ಗುರುದತ್.
ಸದ್ಯಕ್ಕೆ ಗುರುದತ್ ಅವರಿಗೂ ಸಿನಿಮಾದಲ್ಲಿ ಅವಕಾಶಗಳಿಲ್ಲ . ಆದರೆ, ಕಿರುತೆರೆಯಲ್ಲಿ ಗುರು 'ಗುರುಬಲ' ಚೆನ್ನಾಗಿದೆ. ಅವರ ನಿರ್ದೇಶನದ 'ಗೋಧೂಳಿ' ಸೀರಿಯಲ್ ಮುನ್ನೂರು ಕಂತು ಮೀರಿ ಮುಂದುವರೆದಿದೆ. ಗೋಧೂಳಿ ಇನ್ನೂ ಐವತ್ತು ಕಂತು ಪ್ರಸಾರವಾಗುತ್ತದಂತೆ.
ಅಂದಹಾಗೆ, ಗುರುದತ್ ನಿರ್ದೇಶನದ ಸುಧಾರಾಣಿ ಅಭಿನಯದ ಧಾರಾವಾಹಿ ಹೆಸರು 'ತುಳಸಿ'.


Click it and Unblock the Notifications