ಅಶ್ಲೀಲತೆ ಕುರಿತು ಭಿನ್ನ ವೇದಿಕೆಗಳಲ್ಲಿ ಪರ,
ರಂಗ ತಾಲೀಮಲ್ಲಿ ಪಳಗಿರುವ ನಟಿ ಕಂ ರಾಜಕಾರಿಣಿ ಉಮಾಶ್ರೀ ವರಸೆಗಳು ಥೇಟ್ ರಾಜಕಾರಣದ್ದೇ ಆಗುತ್ತಿದೆ. ಹತ್ತುವ ವೇದಿಕೆ ಎಂಥದ್ದೇ ಆಗಲಿ, 'ಆಗತಕ್ಕಂಥ", 'ಮಾಡತಕ್ಕಂಥ" ಅಂತ ಮಾತಿಗೆ ಇಳಿದುಬಿಡುವ ಈಕೆ ಖಂಡಿತ ಒಳ್ಳೆ ನಟಿ.
ಇತ್ತೀಚೆಗಷ್ಟೇ ಒಂದು ಸಮಾರಂಭದಲ್ಲಿ , ಅಶ್ಲೀಲತೆ ಅನ್ನೋದು ನೋಡೋರ ಕಣ್ಣಲ್ಲಿ ಇರತಕ್ಕಂಥದ್ದು. ಪಾತ್ರಕ್ಕೆ, ಸಿಚುಯೇಶನ್ನಿಗೆ ತಕ್ಕ ಹಾಗೆ ಅದು ಇದ್ದರೆ ತಪ್ಪೇನಿಲ್ಲ. ಅದೂ ಕಲೆಯ ಅವಿಭಾಜ್ಯ ಅಂಗವಿದ್ದಂತೆ..." ಹಾಗೆ ಹೀಗೆ ಅಂತ ನಿರರ್ಗಳವಾಗಿ ಭಾಷಣ ಕೊರೆದಿದ್ದ ಇದೇ ಉಮಾಶ್ರೀ ಇನ್ನೊಂದು ಸಭೆಯಲ್ಲಿ ನಿಲುವನ್ನೇ ಬದಲಿಸಿಬಿಟ್ಟರು.
'ಬಾ ಅತಿಥಿ" ಎಂಬ ದಾವಣಗೆರೆಯವರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದ ಉಮಾಶ್ರೀ ಮಾತುಗಳನ್ನ ಕೇಳಿ : 'ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಪಾಶ್ಚಿಮಾತ್ಯ ದಾಳಿಯಿಂದ ಅಶ್ಲೀಲತೆ ಅತಿಯಾಗುತ್ತಿದೆ. ಸೆನ್ಸಾರ್ನವರ ಕತ್ತರಿ ಬಿರುಸಾಗತಕ್ಕಂಥ ಸಮಯ ಹತ್ತಿರವಾಗಿದೆ. ಡಬಲ್ ಮೀನಿಂಗ್ ಡಯಲಾಗ್ಗಳಿಗೆ ಕಡಿವಾಣ ಹಾಕಬೇಕಿದೆ..". ಪ್ರೌಢ ಶಾಲಾ ಚರ್ಚಾ ಸ್ಪರ್ಧೆಯ ಖದರಿನಂತಿದ್ದ ಈ ಮಾತುಗಳು ಅವರ ಮುಂಚಿನ ಸಮಾರಂಭದ ಚಿಂತನೆಗೆ ಅಕ್ಷರಶಃ ತದ್ವಿರುದ್ಧವಾಗಿದ್ದವು.
ಒಂದು ಕಾಲದಲ್ಲಿ ಎನ್ನೆಸ್ ರಾವ್ ಜೊತೆ ಡಬ್ಬಲ್ ಮೀನಿಂಗ್ ಡಯಲಾಗ್ಗಳಿಂದಲೇ ಮೇಲೆ ಬಂದು, ಅದನ್ನು ಆಯಾ ಸಮಯಕ್ಕೆ ತಕ್ಕಂತೆ ಸಮರ್ಥಿಸಿಕೊಳ್ಳುತ್ತಲೇ ಬಂದ ಉಮಾಶ್ರೀ ಈಗಲೂ ನಟನೇಲಿ ಭೇಷ್ ಅನ್ನಿಸಿಕೊಳ್ಳುತ್ತಿದ್ದಾರೆ. ಇದು ಅವರ ಕಲಾ ಪ್ರೀತಿಗೆ ಹಿಡಿದ ಕನ್ನಡಿ.
ಆದರೆ, ಅವರು ದಿನಕ್ಕೊಂದು ಚಿಂತನೆಯನ್ನು ಹೊರಗಿಡುತ್ತಿರುವ ಪರಿಯನ್ನು ನೋಡಿದರೆ ಗೊತ್ತಾಗುತ್ತೆ, ಆಕೆ- ಪಕ್ಕಾ ರಾಜಕಾರಿಣಿ !


Click it and Unblock the Notifications