ಶಿವಾಜಿ ಮತ್ತು ರಾಜ್ ಇದ್ದಿದ್ದರೇ ಖುಷಿ ಪಡುತ್ತಿದ್ದರೇನೋ?
ಕನ್ನಡದಲ್ಲಿ ರಾಜ್ ಕುಮಾರ್ ಇದ್ದಂತೆ, ತಮಿಳಲ್ಲಿ ಶಿವಾಜಿ ಗಣೇಶನ್ ಇದ್ದರು. ಇವರಿಬ್ಬರ ನಡುವೆ ಸಿನಿಮಾ ಹೊರತಾದ ಸಿಹಿ ಬಾಂಧವ್ಯ ಇತ್ತು. ಇಬ್ಬರೂ ಆಪ್ತ ಸ್ನೇಹಿತರು. ಇಂದು ಇಬ್ಬರೂ ಇಲ್ಲ. ಆದರೆ ಈ ಬಾಂಧವ್ಯವನ್ನು ಮುಂದುವರೆಸಲು ಶಿವಾಜಿ ಗಣೇಶನ್ ಕುಟುಂಬ ಉತ್ಸುಕವಾಗಿದೆ. ರಾಜ್ ಕುಟುಂಬವೂ ಪೂರಕವಾಗಿ ಪ್ರತಿಕ್ರಿಯಿಸಿದೆ. ಹೀಗಾಗಿ ಶಿವಾಜಿ ಗಣೇಶನ್ ಕುಟುಂಬ ನಿರ್ಮಾಣ ಮಾಡಲಿರುವ ಹೊಸ ಕನ್ನಡ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕ. ಶಿವಾಜಿ ಮತ್ತು ರಾಜ್ ಈಗ ಇದ್ದಿದ್ದರೇ, ಖುಷಿಪಡುತ್ತಿದ್ದರೇನೋ?
ಹಿಂದೆ ಶಿವಾಜಿ ಗಣೇಶನ್ ಅನೇಕಾನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಶಿವಾಜಿ ಪ್ರೊಡಕ್ಷನ್ ತಮಿಳುನಾಡಿನಲ್ಲಿ ಪ್ರಮುಖ ಚಿತ್ರ ನಿರ್ಮಾಣ ಸಂಸ್ಥೆ. ದುರದೃಷ್ಟವೆಂದರೇ, ಶಿವಾಜಿ ಗಣೇಶನ್ ಕಾಲದಲ್ಲಿ ಆಗದ್ದು ಈಗ ಆಗಿದೆ. ಅಂದರೆ, ತಮಿಳು ಮತ್ತು ತೆಲುಗು ಚಿತ್ರಗಳಲ್ಲದೇ ಕನ್ನಡ ಚಿತ್ರ ನಿರ್ಮಾಣ ಮಾಡಲು ಶಿವಾಜಿ ಪ್ರೊಡಕ್ಷನ್ ಸಜ್ಜಾಗಿದೆ. ಇತ್ತೀಚೆಗೆ ಶಿವಾಜಿ ಪ್ರೊಡಕ್ಷನ್ ನಿರ್ಮಿಸಿದ 'ಚಂದ್ರಮುಖಿ'(ಆಪ್ತಮಿತ್ರ ಚಿತ್ರದ ರೀಮೇಕ್, ರಜನಿಕಾಂತ್ ನಾಯಕ)ಬಾಕ್ಸಾಫೀಸಲ್ಲಿ ಗೆದ್ದಿದೆ.
'ಚಂದ್ರಮುಖಿ'ನಿರ್ದೇಶಿಸಿದ್ದ ಪಿ.ವಾಸು, ಪುನೀತ್ ಅವರ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ವಾಸು ಈಗ ತೆಲುಗು ಚಿತ್ರವೊಂದರಲ್ಲಿ ಸಕತ್ತು ಬಿಜಿ. ಸದ್ಯದಲ್ಲಿಯೇ ಪುನೀತ್ ಚಿತ್ರಕ್ಕಾಗಿ ಚಿತ್ರಕತೆ, ತಾರಾಬಳಗದ ಆಯ್ಕೆ ಪ್ರಕ್ರಿಯೆಯಲ್ಲಿ ವಾಸು ತೊಡಗಿಸಿಕೊಳ್ಳಲಿದ್ದಾರೆ. ಏಪ್ರಿಲ್ 2008ರಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಶಿವಾಜಿ ಪ್ರೊಡಕ್ಷನ್ ಹೇಳಿದೆ. ಚಿತ್ರ ಹೇಗಿರುತ್ತದೆಯೋ?
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications