‘ರೌಡಿ ಅಳಿಯ’ನಿಗೆ ಬೈಕ್ ರ್ಯಾಲಿ ಪ್ರಚಾರ
*ದಟ್ಸ್ಕನ್ನಡ ಬ್ಯೂರೋ
ಹೇಳಿಕೇಳಿ ಅವತ್ತು ರಾಜ್ಯೋತ್ಸವ. ಬೆಂಗಳೂರಿನ ಎಚ್.ಎನ್. ಕಲಾಕ್ಷೇತ್ರದ ಆವರಣದ ತುಂಬಾ ಬೈಕ್ಗಳು. ಆ ಬೈಕ್ಗಳ ಮೇಲೆ ಬಣ್ಣ ಬಣ್ಣದ ಪಂಚೆ ಉಟ್ಟು, ಗುಂಡಿ ಹಾಕದೆ ಅಂಗಿ ತೊಟ್ಟ ಯುವಕರು. ಆ ಗುಂಡಿಯಿಲ್ಲದ ಅಂಗಿಯಾಳಗೆ ಸೊಳ್ಳೆ ಪರದೆಯಂಥಾ ಬನಿಯನ್ನು. ಇದ್ಯಾವ ಪರಿಯ ರಾಜ್ಯೋತ್ಸವದ ಆಚರಣೆ ಎಂದು ನೋಡುವಷ್ಟರಲ್ಲಿ ನಟ ಶಿವರಾಜ್ಕುಮಾರ್ ಇನ್ನೊಂದು ಕನ್ನಡ ಬಾವುಟವನ್ನು ಗಾಳಿಗೊಡ್ಡಿ ಬೀಸಿದರು. ಬೈಕುಗಳೆಲ್ಲ ಭರ್ರೆಂದು ಚೆಲ್ಲಾಪಿಲ್ಲಿಯಾದವು.
ಇದು ‘ರೌಡಿ ಅಳಿಯ’ ಚಿತ್ರದ ಪ್ರಚಾರದ ಹೊಸ ತಂತ್ರ. ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ಬೈಕು ಸವಾರರು ತೆರಳಿ, ಜನರಿಗೆ ಪ್ರಶ್ನೆಗಳೊಡ್ಡಿದರು. ಉತ್ತರ ಕೊಟ್ಟ ಅದೃಷ್ಟಶಾಲಿಗಳಿಗೆ ‘ರೌಡಿ ಅಳಿಯ’ ಆಡಿಯೋ ಕ್ಯಾಸೆಟ್ ಹಾಗೂ ಒಂದು ಟಿ- ಶರ್ಟ್ ಉಡುಗೊರೆ. ನಿರ್ಮಾಪಕ ಎಂ.ಸಿ.ನೇಹಾ ಹಾಗೂ ಶ್ಯಾಮ್ ಹೊಸೆದಿದ್ದ ಈ ಪ್ರಚಾರ ತಂತ್ರ ಸಾಕಷ್ಟು ಕ್ಲಿಕ್ಕೂ ಆಯಿತು.
ಈ ಪ್ರಚಾರದ ತಂತ್ರದ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ ಹಾಗೂ ಜಯಮಾಲ ಒಂದು ಚೆಂದದ ಮಾತಾಡಿದರು. ಹಿಂದೆ ಎಚ್.ಎನ್.ಕಲಾಕ್ಷೇತ್ರದಲ್ಲಿ ಪ್ರತಿವರ್ಷ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಸದ್ಯರು ಸಭೆ ಸೇರಿ, ಸಾಧಕರನ್ನು ಸನ್ಮಾನಿಸುತ್ತಿದ್ದರು. ಆದರೀಗ ಅದು ನಿಂತುಹೋಗಿದೆ. ಈ ಕೆಲಸ ಮತ್ತೆ ಶುರುವಾಗಬೇಕು ಎಂಬುದು ಶಿವರಾಜ್ ಹಾಗೂ ಜಯಮಾಲ ಕಳಕಳಿಯಾಗಿತ್ತು. ಇದನ್ನು ಚಿತ್ರದ ನಿರ್ದೇಶಕ ಸಾಯಿ ಪ್ರಕಾಶ್ ಕೂಡ ಸಮ್ಮತಿಸಿದರು.
ಡಬ್ಬಿಂಗ್ ಮುಗಿಸಿರುವ ‘ರೌಡಿ ಅಳಿಯ’ ಚಿತ್ರಕ್ಕೆ ಮೊದಲ ಪ್ರತಿಕ್ರಿಯೆ ಚೆನ್ನಾಗಿದೆ. ಸದ್ಯಕ್ಕೆ ಡಿಟಿಎಸ್ ತಂತ್ರಜ್ಞಾನ ಅಳವಡಿಸುವ ಕೆಲಸ ನಡೆದಿದೆ. ಚಿತ್ರದ ವಿಶೇಷಗಳೆಂದರೆ-
- ಪಟ್ಟದಕಲ್ಲಿನ ಒಂದು ಲೊಕೇಷನ್ನಲ್ಲಿ ಚಿತ್ರದ ಕೆಲವು ಶಾಟ್ಗಳನ್ನು ಚಿತ್ರೀಕರಿಸಲಾಗಿದೆ. ಈ ಜಾಗದಲ್ಲಿ ಈವರೆಗೆ ಯಾವ ಚಿತ್ರವನ್ನೂ ಚಿತ್ರೀಕರಿಸಿಲ್ಲ.
- ಈ ಚಿತ್ರದ ಹಾಡುಗಳಿಗೆ ಏಳು ಸಂಗೀತ ನಿರ್ದೇಶಕರು ಮಟ್ಟು ಹಾಕಿದ್ದಾರೆ ! ಒಂದು ಹಾಡನ್ನು ಖುದ್ದು ಶಿವರಾಜ್ಕುಮಾರ್ ಹಾಡಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications