ಮುಖ್ಯಮಂತ್ರಿ ಐ ಲವ್ ಯೂ ಚಿತ್ರದ ಹರಿಪ್ರಿಯ
ಬಾಲಿವುಡ್ ನ ಐಶ್ವರ್ಯ ರೈ ಅವರಂತೆ ನಾನು ಕೂಡ ಯಶಸ್ಸು ಗಳಿಸಬೇಕು ಎಂಬುದು ನನ್ನ ಗುರಿ ಎನ್ನುವ ಕನ್ನಡದ ಹುಡುಗಿ ಹರಿಪ್ರಿಯಾ ಅವರಿಗೆ, ಮುಖ್ಯಮಂತ್ರಿ ಐ ಲವ್ ಯೂ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿದೆ.
ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ನಿರ್ದೇಶನದ ಈ ಚಿತ್ರದಲ್ಲಿ ದುನಿಯಾ ಖ್ಯಾತಿಯ ವಿಜಯ್ ಗೆ ಜೋಡಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾನು ಮುಖ್ಯಮಂತ್ರಿ ತಂತ್ರೇಗೌಡ(ವಿಜಯ್) ಪತ್ನಿಯಾಗಿ ನಟಿಸುತ್ತಿದ್ದೇನೆ. ನನ್ನದು ಐಎಎಸ್ ಅಧಿಕಾರಿಣಿ ಪಾತ್ರ. ರವಿ ಸಾರ್ ಅವರ ಚಿತ್ರ ಎಂದು ಒಪ್ಪಿಕೊಂಡೆ ಎನ್ನುತ್ತಾರೆ ಹರಿಪ್ರಿಯಾ. ಈ ಚಿತ್ರದ ನಾಯಕ ತಂತ್ರೇಗೌಡ ನಂತರ ಸಿನಿಮಾ ನಟಿಯೊಬ್ಬಳ ಹಿಂದೆ ಬೀಳುವುದರ ಮೂಲಕ ಕಥೆಗೆ ತಿರುವು ಸಿಗುತ್ತದೆ ಎಂದರು.
ಕನ್ನಡದಲ್ಲಿ 'ಮನಸುಗಳ ಮಾತು ಮಧುರ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, ನಂತರ 'ವಸಂತಕಾಲ 'ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಎರಡೂ ಚಿತ್ರಗಳು ಬಾಕ್ಸಾಫೀಸಿನಲ್ಲಿ ಮುಗ್ಗರಿಸಿದ್ದವು. ಅದೂ ಸಾಲದೇ' ಮನಸುಗಳ ..'ಚಿತ್ರದ ನಾಯಕ ಯು2 ಚಾನೆಲ್ ಖ್ಯಾತಿಯ ಆನಂದ್ ಜತೆಗೆ ಹರಿಪ್ರಿಯಾರ ಹೆಸರು ಸೇರಿಕೊಂಡು ಗುಲ್ಲೆದ್ದಿತ್ತು. ಈ ಚಿತ್ರಗಳ ನಂತರ ಕೊಂಚ ಕಣ್ಮರೆಯಾದವರು ಮತ್ತೆ ಪ್ರತ್ಯಕ್ಷಗೊಂಡಿದ್ದಾರೆ. ಈ ಅವಧಿಯಲ್ಲಿ ತಮಿಳಿನಲ್ಲಿ ಕರಣ್ (ಹ್ಞೂ ಅಂತಿಯಾ.. ಹ್ಞುಂ ಅಂತಿಯಾ..ಚಿತ್ರ) ನಾಯಕತ್ವದ 'ಕನಗವೇಲ್ ಕ್ಕಾಗ; ಚಿತ್ರದಲ್ಲಿ ಅಭಿನಯಿಸಿ ಬಂದಿದ್ದಾರೆ. ಕನ್ನಡದ ಒಂದೆರಡು ಚಿತ್ರದಲ್ಲಿ ಕಾಣಿಸಿಕೊಂಡ ಕರಣ್ ಜತೆ ಹರಿಪ್ರಿಯಾ ಜೋಡಿ , ತಮಿಳಿಗರನ್ನು ಮೋಡಿ ಮಾಡುವುದೋ ಇಲ್ಲವೋ ಕಾದು ನೋಡಬೇಕು.
ಇದಲ್ಲದೆ ಕನ್ನಡದಲ್ಲಿ 'ಈ ಸಂಭಾಷಣೆ' ಚಿತ್ರದಲ್ಲಿ ಹರಿಪ್ರಿಯಾ ಕಾಣಸಿಗುತ್ತಾರೆ. ಇದಕ್ಕೂ ಮುಂಚೆ ಸುಮಾರು 15- 20 ಆಫರ್ ಗಳು ಬಂದವು ಆದರೆ ಕಥೆ ಒಪ್ಪಿಗೆಯಾಗಲಿಲ್ಲ. ನಟನೆಗೆ ಪ್ರಾಮುಖ್ಯತೆ ಇದ್ದರೆ ಮಾತ್ರ ನಾನು ಒಪ್ಪುತ್ತೇನೆ. ಗ್ಲಾಮರ್ ಪಾತ್ರವಾದರೂ ಓಕೆ. ಆದರೆ ಎಕ್ಸ್ ಪೋಸ್ ಮಾಡುವುದಿಲ್ಲ. ನಾನು ಕನ್ನಡದ ಹುಡುಗಿ ಎಂದು ಹೆಮ್ಮೆಯಿಂದ ಹರಿಪ್ರಿಯಾ ಹೇಳುತ್ತಾರೆ.
ಗಾಸಿಪ್ ಗೆ ಗೋಲಿಮಾರೋ
ಚಿತ್ರರಂಗ ಅಂದ ಮೇಲೆ ಗಾಸಿಪ್ ಇದ್ದದ್ದೇ. ಮೊದಮೊದಲು ಮನಸುಗಳ ಚಿತ್ರದ ಹೀರೋ ಜತೆ ಸಂಬಂಧ ಕಲ್ಪಿಸಿದ್ದು, ನಿರ್ದೇಶಕ ಮಂಜು ಮಸ್ಕಲ್ ಕಟ್ಟಿ ಅವರ ಜತೆ ಜಗಳ ಹೀಗೆ ತಲೆ ಬುಡವಿಲ್ಲದ ಗಾಸಿಪ್ ಗಳಿಂದ ತುಂಬಾ ಹೆದರಿದ್ದೆ. ಆದರೆ, ಈಗ ನಾನು ನನ್ನ ವೃತ್ತಿ ಬಗ್ಗೆ ಮಾತ್ರ ಆಲೋಚಿಸುತ್ತಿದ್ದೇನೆ. ಉತ್ತಮ ಪಾತ್ರಗಳನ್ನು ಮಾಡುವುದು ನನ್ನ ಗುರಿ ಎನ್ನುತ್ತಾರೆ ಹರಿಪ್ರಿಯಾ.
ಕನ್ನಡದ ಈ ಸಂಭಾಷಣೆ ಚಿತ್ರದ ಹಾಡುಗಳನ್ನು ಇಷ್ಟಪಡುವ ಹರಿಪ್ರಿಯಾ, ಮುಖ್ಯಮಂತ್ರಿ ಐಲವ್ ಯೂ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ ಎಂದು ಮತ್ತೆ ಮತ್ತೆ ಹೇಳಿದರು. ಈಗಾಗಲೇ ರವಿಬೆಳೆಗೆರೆ ವಿರುದ್ಧ ಮಾನಹಾನಿ ನಷ್ಟ ಎಂದು ದೇವೇಗೌಡರು 10 ಕೋಟಿ ಪರಿಹಾರ ಕೋರಿ ಕೋರ್ಟ್ ಮೆಟ್ಟಲೇರಿ, ಮುಖ್ಯಮಂತ್ರಿ ಚಿತ್ರಕ್ಕೆ ಪುಕ್ಕಟೆ ಪ್ರಚಾರ ನೀಡಿದ್ದಾರೆ. ನ್ಯಾಯಾಧೀಶರು ವೀಕ್ಷಿಸಿ, ಒಪ್ಪಿಗೆ ನೀಡಿದ ನಂತರವಷ್ಟೇ ಸಾರ್ವಜನಿಕ ವೀಕ್ಷಣೆಗೆ ಚಿತ್ರ ಲಭ್ಯವಾಗಲಿದೆ ಎನ್ನುವುದು ಈಗ ಹಳೆ ಸುದ್ದಿ. ಕನ್ನಡದ ಹುಡುಗಿ ಹರಿಪ್ರಿಯಾ, ಇಲ್ಲೇ ಉಳಿಯಬೇಕಾದರೆ ಸೂಕ್ತ ಪಾತ್ರಗಳನ್ನು ನೀಡಿ, ಉಳಿಸಿಕೊಳ್ಳಬೇಕದ್ದು ನಿರ್ದೇಶಕರಿಗೆ ಬಿಟ್ಟಿದ್ದು, ಪ್ರತಿಭಾವಂತರನ್ನು ಬೆಳೆಸುವುದು ಪ್ರೇಕ್ಷಕರ ಪಾಲಿಗಂತೂ ಇದ್ದದ್ದೇ.


Click it and Unblock the Notifications











