ಸೆಕ್ಸಿ ತಾರೆ ನಮಿತಾ ಡಾನ್ಸ್ಗಾಗಿ ಒಂದು ಗಂಟೆ ಕಾದ ಸಚಿವ
ಸಾಮಾನ್ಯವಾಗಿ ರಾಜಕಾರಣಿಗಳಿಗಾಗಿ ಜನ ಕಾಯಬೇಕಾಗುತ್ತದೆ. ಆದರೆ ಇದಕ್ಕೆ ತದ್ವಿರುದ್ದವಾದ ಕೇಸೊಂದು ಊಟಿಯಲ್ಲಿ ನಡೆದಿದೆ. ಸೆಕ್ಸಿ ತಾರೆ ನಮಿತಾ ಡಾನ್ಸ್ ನೋಡಲು ಸಿಕ್ಕಾಪಟ್ಟೆ ಜನ ಜಮಾಯಿಸಿದ್ದರು. ಇದರಲ್ಲಿ ತಮಿಳು ನಾಡು ಖಾದಿ ಮಂಡಳಿ ಸಚಿವ ಕೆ ರಾಮಚಂದ್ರ ಕೂಡ ಒಬ್ಬರು. ಕಾರ್ಯಕ್ರಮಕ್ಕೆ ನಮಿತಾ 45 ನಿಮಿಷ ತಡವಾಗಿ ಬಂದರೂ ಇವರೆಲ್ಲಾ ಕಮಕ್ ಕಿಮಕ್ ಎನ್ನದೆ ಕಾದುಕುಳಿತಿದ್ದರು.
ನಮಿತಾರ ಡಾನ್ಸ್ ಕಾರ್ಯಕ್ರಮವನ್ನು ಕೇರಳ ಮೂಲಕ ಚಿನ್ನಾಭರಣ ಮಳಿಗೆಯೊಂದು ಆಯೋಜಿಸಿತ್ತು. ರಸ್ತೆ ಬದಿಯಲ್ಲೇ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ನಮಿತಾ ನಾಟ್ಯ ಮಾಡಲು ಒಪ್ಪಿದ್ದರು ಎನ್ನಲಾಗಿದೆ. ಈ ವಿಷಯ ಜನರ ಕಿವಿಗೆ ಬಿದ್ದಿದ್ದೇ ತಡ, ಯುವಕರಿಂದ ಮುದುಕರತನಕ ಎಲ್ಲರೂ ತಾ ಮುಂದು ನಾ ಮುಂದು ಎಂದು ಬಂದಿದ್ದರು.
ಇನ್ನೇನು ನಮಿತಾರ ಡಿಂಗು ಡಾಂಗ್ ಸಾಂಗ್ ಶುರುವಾಗಬೇಕು ಅನ್ನುವಷ್ಟರಲ್ಲಿ ದಿಢೀರ್ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಪ್ರತ್ಯಕ್ಷವಾಗಿದ್ದಾರೆ. ಆರಂಭದಲ್ಲೇ ಕಾರ್ಯಕ್ರಮಕ್ಕೆ ಕಲ್ಲು ಬಿದ್ದ ಕಾರಣ ಬೇಸರಗೊಂಡ ನಮಿತಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಕಾತರದಿಂದಕುಳಿತಿದ್ದ ಜನ ಕೂಡ ನಿರಾಸೆಯಿಂದ ಚದುರಿ ಹೋಗಿದ್ದಾರೆ.
ಇಷ್ಟಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೇಕೆ ಬಂದರು. ಅವರೇನು ದಾರಿ ತಪ್ಪಿ ಬಂದಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಹಾವುಗಳನ್ನು ಬಳಸಲಾಗುತ್ತಿದೆ ಎಂದು ಯಾರೋ ಅವರ ಕಿವಿಗೆ ಸುದ್ದಿ ಮುಟ್ಟಿಸಿದ್ದರು. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಹಾವು ಸಿಗದೆ ಅವರೂ ನಿರಾಶರಾಗಿ ಅಲ್ಲಿಂದ ಜಾಗ ಖಾಲಿಮಾಡಿದ್ದಾರೆ.
ಆದರೆ ಪ್ರತ್ಯಕ್ಷ ಕಂಡವರು ಹೇಳುವುದೇನೆಂದರೆ, ನಮಿತಾ ಅವರ ಚಳಿ ಚಳಿ ತಾಳೆನು ಈ ಚಳಿಯಾ ಹಾಡಿಗಾಗಿ ಹಾವುಗಳನ್ನು ತರಿಸಲಾಗಿತ್ತಂತೆ. ಆದರೆ ಅರಣ್ಯ ಇಲಾಖೆ ಬರುತ್ತಿದ್ದಂತೆ ಅವರು ಅದು ಹೇಗೋ ಮಂಗಮಾಯವಾದರಂತೆ. ಇತ್ತ ಹಾವು ಇಲ್ಲ ಅತ್ತ ನಮಿತಾಳೂ ಇಲ್ಲ. ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದನೀರು! (ದಟ್ಸ್ಕನ್ನಡ ಸಿನಿ ವಾರ್ತೆ)


Click it and Unblock the Notifications











