ಸೈಕಾಲಜಿ ಬಗ್ಗೆ ಅಮೂಲ್ಯ ಹೊಸ ಮನಸಾಲಜಿ
ಮನಸಿನ ಬಗ್ಗೆ ಹೇಳಬೇಕೆಂದರೆ ಮನಶಾಸ್ತ್ರಜ್ಞರೇ ಆಗಬೇಕೆಂದೇನು ಇಲ್ಲ. ಕವಿ ಹೃದಯವುಳ್ಳವರು ಗೀತ ಸಾಹಿತಿ ಕೆ ಕಲ್ಯಾಣ್ ತರಹ "ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ..." ಎಂದು ಹಾಡನ್ನು ಗೀಚಬಹುದು . ಈಗ ಮನಸ್ಸಿನ ಸೈಕಾಲಜಿ ಬಗ್ಗೆ ಹೇಳಲು ಬರುತ್ತಿದ್ದಾರೆ ನಟಿ ಅಮೂಲ್ಯ!
ಚುಂಬನ ಪ್ರಕರಣದ ಬಳಿಕ ಅಮೂಲ್ಯ ಕೊಂಚ ಕಾಲ ತೆರೆಮರೆಗೆ ಸರಿದಿದ್ದರು. ಈಗ ಮತ್ತೆ ಅವರು ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಮನಸಾಲಜಿ'. ಶೀರ್ಷಿಕೆ ವಿಚಿತ್ರವಾಗಿದೆಯಲ್ಲವೆ? ಈ ಹಿಂದೆ ಅಮೂಲ್ಯ ಮುಖ್ಯಭೂಮಿಕೆಯಲ್ಲಿದ್ದ ಚಿತ್ರಕ್ಕೆ ಇದೇ ರೀತಿಯಲ್ಲಿ ವಿಚಿತ್ರವಾಗಿ 'ಪ್ರೇಮಿಸಂ' ಎಂದು ಹೆಸರಿಡಲಾಗಿತ್ತು.
ಅಂದಹಾಗೆ 'ಮನಸಾಲಜಿ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಅಮೂಲ್ಯ ಅವರ ಅಣ್ಣ ದೀಪಕ್. ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗಲು ಹೊರಟಿದ್ದಾರೆ. ಚಿತ್ರದ ನಾಯಕ ನಟ 'ಜೋಶ್' ಖ್ಯಾತಿಯ ರಾಕೇಶ್. ಮುಂದಿನ ತಿಂಗಳು 'ಮನಸಾಲಜಿ' ಚಿತ್ರೀಕರಣ ಆರಂಭವಾಗಲಿದೆ.


Click it and Unblock the Notifications











