ಗಿರಿಕನ್ಯೆ ಜಯಮಾಲಾಗೆ ಅಯ್ಯಪ್ಪ ಸ್ವಾಮಿ ಶಾಪ ವಿಮೋಚನೆ
ಸಾಕಷ್ಟು ವಾದ ವಿವಾದ, ಚರ್ಚೆಗೆ ಗ್ರಾಸವಾಗಿದ್ದ 'ಗಿರಿಕನ್ಯೆ' ಖ್ಯಾತಿಯ ಜಯಮಾಲಾ ಅವರ ಅಯ್ಯಪ್ಪ ಸ್ವಾಮಿ ಪಾದಸ್ಪರ್ಶ ಪ್ರಕರಣ ಕಡೆಗೂ ಸುಖಾಂತ್ಯ ಕಂಡಿದೆ. ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯನ್ನು ಸ್ಪರ್ಶಿಸಿದ್ದನಟಿ ಜಯಮಾಲಾ ಪ್ರಕರಣವನ್ನು ಕೇರಳ ಹೈಕೋರ್ಟ್ ಮಂಗಳವಾರ (ಏ.12)ಅನೂರ್ಜಿತಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಮಾಲಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ 52 ವರ್ಷದ ನಟಿಯನ್ನು ಮೂರನೇ ಆರೋಪಿಯನ್ನಾಗಿ ಮಾಡಲಾಗಿತ್ತು.
"ಒಂದು ವೇಳೆ ವಿಳಂಬಕ್ಕೆ ಕಾರಣ ಏನು ಎಂಬುದರ ಬಗ್ಗೆ ಅಪರಾಧ ವಿಭಾಗ ಚಾರ್ಚ್ ಶೀಟ್ ಸಲ್ಲಿಸಿದರೆ ಗಮನಿಸಲಾಗುವುದು " ಎಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಜೋಸೆಫ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದಾರೆ. "ಪ್ರಕರಣದ ತನಿಖೆ 2009ರಲ್ಲಿ ಆರಂಭವಾಗಿದ್ದರೂ 2011ರಲ್ಲಿ ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ಇಷ್ಟೊಂದು ವಿಳಂಬವಾಗಿ ಚಾರ್ಜ್ ಶೀಟ್ ಸಲ್ಲಿಸಲು ಕಾರಣ ಏನು ಎಂದು ಪ್ರಶ್ನಿಸಿ ಜಯಮಾಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
1987ರಲ್ಲಿ ತಾವು ದೇಗುಲದ ಗರ್ಭಗುಡಿ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ಪಾದ ಸ್ಪರ್ಶ ಮಾಡಿದ್ದಾಗಿ ಜಯಮಾಲಾ ಅವರು 2006ರಲ್ಲಿ ಅಷ್ಟಮಂಗಲ ಪ್ರಶ್ನೋತ್ತರ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದರು. ದೇವಾಲಯದೊಳಗೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸುವಂತಿಲ್ಲ. ನಿಯಮಗಳನ್ನು ಗಾಳಿತೂರಿದ್ದಕ್ಕಾಗಿ ಜಯಮಾಲಾ ಮತ್ತಿತರ ಮೂವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ದೇವಸ್ಥಾನದ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್, ಅವರ ಸಹಾಯಕ ರಘುಪತಿ ಮತ್ತು ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ರಾಜಶೇಖರ್ ಇನ್ನಿತರರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.
ಋತುಮತಿಯಾದ ಮಹಿಳೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲದಿದ್ದರೂ ತಾವು ದೇವಳ ಪ್ರವೇಶಿಸಿ ಅಯ್ಯಪ್ಪನ ಪಾದಸ್ಪರ್ಶ ಮಾಡಿದ್ದಾಗಿ ಹೇಳಿದ್ದು ದೇಶದಾದ್ಯಂತ ಭಾರೀ ವಿವಾದಕ್ಕೆ ಈಡುಮಾಡಿತ್ತು. ಕೇರಳದ ಶಬರಿಮಲೆಗೆ ದೇಶದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಶಬರಿಮಲೆ ಬೆಟ್ಟದಲ್ಲಿ ಸಂಕ್ರಾಂತಿಯಂದು ಮಕರಜ್ಯೋತಿ ದರ್ಶನ ಪಡೆದ ಲಕ್ಷಾಂತರ ಭಕ್ತರು ಭಾವಪರವಶರಾಗಿ ಪುನೀತರಾಗುತ್ತಾರೆ.


Click it and Unblock the Notifications











