ಈಜು ಕೊಳಕ್ಕೆ ಬಿದ್ದು ಗಾಯಕಿ ಚಿತ್ರಾ ಮಗಳ ದುರಂತ ಸಾವು

ಚಿತ್ರಾ ಮತ್ತು ವಿಜಯಶಂಕರ್ ಅವರು ಮದುವೆಯಾದ ಎಂಟು ವರ್ಷಗಳ ಬಳಿಕ ಮಗಳು ನಂದನಾ ಜನಿಸಿದ್ದರು. ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುವ ಸಲುವಾಗಿ ಚಿತ್ರಾ ಅವರು ತಮ್ಮ ತಂಡದೊಡನೆ ದುಬೈಗೆ ಹೋಗಿದ್ದರು. ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ ಆರ್ ರೆಹಮಾನ್ ಅವರ ಸಂಗೀತ ಸಂಯೋಜನೆಯ ಸಂಗೀತ ಕಾರ್ಯಕ್ರಮ ಇಂದು ಸಂಜೆ ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದೆ.
ದಕ್ಷಿಣ ಭಾರತದ "ಮರಿ ಕೋಗಿಲೆ" ಎಂಬ ಹೆಗ್ಗಳಿಕೆಗೆ ಕೆ ಎಸ್ ಚಿತ್ರಾ ಪಾತ್ರರಾಗಿದ್ದರು. ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಚಿತ್ರಾ ಆರು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು. ಈ ಮೂಲಕ ಭಾರತದಲ್ಲೇ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಮಹಿಳಾ ಗಾಯಕಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಕನ್ನಡದಲ್ಲಿ ಇತ್ತೀಚೆಗೆ ಸ್ಕೂಲ್ ಮಾಸ್ಟರ್, ನೆನೆಯುವೆ ನಿನ್ನೆ, ತಾರೆ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ್ದರು.
ಚಿತ್ರಾ ಅವರು ಕನ್ನಡಲ್ಲಿ ಹಾಡಿರುವ ಬಹಳಷ್ಟು ಹಾಡುಗಳು ಜನಪ್ರಿಯವಾಗಿವೆ. ಅವುಗಳಲ್ಲಿ 'ಅರುಣರಾಗ' ಚಿತ್ರದ "ನಾನೊಂದು ತೀರಾ ನೀನೊಂದು ತೀರಾ ಮನಸು ಮನಸು ದೂರ ಪ್ರೀತಿ ಹೃದಯ ಭಾರ..." ಎಂಬ ಹಾಡು ದುಃಖದಲ್ಲಿರುವವರಿಗೆ ಸಾಂತ್ವನ ನೀಡುತ್ತದೆ. ಈ ಸಂದರ್ಭದಲ್ಲಿ ಈ ಹಾಡನ್ನು ನೆನೆಸಿಕೊಳ್ಳಬೇಕಾಗಿರುವುದು ನಿಜಕ್ಕೂ ವಿಷಾದನೀಯ. 'ಪುತ್ರ (ತ್ರಿ) ಶೋಕಂ ನಿರಂತರಂ' ಎಂಬ ಮಾತಿಗೆ, ಚಿತ್ರಾ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.


Click it and Unblock the Notifications











