ಐದು ಹುಡುಗಿಯರಿಗೆ ಕೈ ಕೊಟ್ಟ ಉಪೇಂದ್ರ
ಒಬ್ಬ ನಾಯಕ ಮತ್ತು ಐದುಜನ ನಾಯಕಿಯರು ಐವರಿಗೂ ಕೈಕೊಡುವುದೇ ಈ ನಾಯಕನ ಕಾಯಕ. ಕೊನೆಯಲ್ಲಿ ನಾಯಕಿಯರಿಂದ ಪಾಠ ಕಲಿಯುವ 'ಬುದ್ಧಿವಂತ' ನಾಯಕ.ಇದು ಮಾರ್ಚ್ ನಲ್ಲಿ ತೆರೆಕಾಣಲಿರುವ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಮೋಹನ್ ಮತ್ತು ಶಂಕರೇಗೌಡರ ನಿರ್ಮಾಣದ ಹಾಗೂ 'ಬಿಸಿಬಿಸಿ' ಚಿತ್ರದ ರಾಮನಾಥ್ ನಿರ್ದೇಶನದ 'ಬುದ್ಧಿವಂತ' ಚಿತ್ರದ ಸಾರಂಶ.
ಪೂಜಾಗಾಂಧಿ,ಸಲೋನ ಮತ್ತು ಮೂವರು ಮುಂಬೈನ ಹುಡುಗಿಯರು ನಾಯಕಿಯರಾಗಿ ನಟಿಸಿದ್ದಾರೆ. ಈ ಹಿಂದೆ ಉಪೇಂದ್ರ ಚಿತ್ರದಲ್ಲಿ ಮೂರುಜನ ನಾಯಕಿಯರಿಗೆ ಕೈಕೊಟ್ಟು ಚಿತ್ರವನ್ನು ಸೂಪರ್ ಹಿಟ್ ಮಾಡಿದ್ದರು.'ಹುಡ್ಗೀರೆ ಹುಷಾರ್' ಎಂಬುದು ಈ ಚಿತ್ರದ ನೀತಿಕತೆಯಂತೆ!
ಕೈ ಕೊಡುವುದಕ್ಕೂ ಸಹ ಸ್ಪೂರ್ತಿ 30ವರ್ಷದ ಕೆಳಗೆ ತಮಿಳಿನಲ್ಲಿ ತೆರೆಕಂಡ ಜೆಮಿನಿ ಗಣೇಶನ್ ಅಭಿನಯದ 'ನಾನ್ ಅವನ್ ಇಲೈ' ಮತ್ತು 1960-70ರ ದಶಕದಲ್ಲಿ ಮರಾಠಿಯಲ್ಲಿ ಇದೇ ಕತೆಯ ಆಧಾರವನ್ನಿಟ್ಟುಕೊಂಡು ಬರೆದ 'ಮೈಥಿ ನವೀಜ್' ನಾಟಕ. ಇವೆರಡರ ಆಧಾರದ ಮೇಲೆ ಕನ್ನಡಕ್ಕೆ ಸರಿಹೊಂದುವಂತೆ ಚಿತ್ರವನ್ನು ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕ ರಾಮನಾಥ್ ತಿಳಿಸಿದರು. ಜೆಮಿನಿ ಗಣೇಶನ್ ತಮಿಳು ಚಿತ್ರ ಕೂಡ ಇತ್ತೀಚೆಗೆ ತಮಿಳಿನಲ್ಲಿ ರಿಮೇಕ್ ಆಗಿ ಯಶಸ್ವಿಯಾಗಿತ್ತು
ಈ ಚಿತ್ರದಲ್ಲಿ ರಕ್ತಕಣ್ಣೀರು ಮತ್ತು ಉಪೇಂದ್ರ ಚಿತ್ರಗಳ ಸ್ವಲ್ಪ ನೆರಳಿದ್ದರೂ ಯಥಾವತ್ತಾಗಿ ಚಿತ್ರಕತೆಯನ್ನು ಬಳಸಲಾಗಿಲ್ಲ ಹಾಗಾಗಿ ರಕ್ತಕಣ್ಣೀರು ಭಾಗ 2 ಎಂದು ಕರೆಯಬಹುದೇ ಎನ್ನುವ ಪ್ರಶ್ನೆಗೆ ನಿಮ್ಮ ಭಾವ ನಿಮ್ಮ ವ್ಯಾಖ್ಯಾನ ಎಂಬ ಬುದ್ಧಿವಂತಿಕೆಯ ಉತ್ತರವನ್ನು ಕೊಟ್ಟ ಉಪೇಂದ್ರ ಮರಾಠಿ ಮತ್ತು ತಮಿಳಿನ ಚಿತ್ರಕತೆಗಳಿಂದ ಸ್ಪೂರ್ತಿಪಡೆದಿರುವುದು ಮಾತ್ರ ನಿಜ ಎಂದು ಒಪ್ಪಿಕೊಂಡರು.
ರವಿವರ್ಮನ ಕುಂಚದ ಕಲೆ.....
ಅಂದು ಪಿ.ಬಿ. ಶ್ರೀನಿವಾಸ್ ಕಂಠದಿಂದ ಸೊಗಸಾಗಿ ಮೂಡಿ ಬಂದ 'ರವಿವರ್ಮನಾ.. ಕುಂಚದ ಕಲೆ ಬಲೆ...' ಹಾಡಿನ ರೀಮಿಕ್ಸ್ ಗೀತೆ ಬುದ್ಧಿವಂತ ಚಿತ್ರದ ವಿಶೇಷಗಳಲ್ಲಿ ಒಂದು. ಈ ರೀಮಿಕ್ಸ್ ಹಾಡನ್ನು ಹರಿಹರನ್ ಹಾಡಿದ್ದು, ವಿಜಯ್ ಅಂಥೋಣಿ ಸಂಗೀತ ಸಂಯೋಜನೆ ಮಾಡಿದ್ದ್ದಾರೆ. ತಲಾ ಐದು ಜನ ನಾಯಕಿಯರೊಂದಿಗೆ ಒಂದೊಂದು ಮತ್ತು ಐದೂ ನಾಯಕಿಯರೊಂದಿಗೆ ಒಂದು ಹಾಡು ಸೇರಿ ಒಟ್ಟು ಚಿತ್ರದಲ್ಲಿ ಆರು ಹಾಡುಗಳಿವೆ ಚೀನಾದ ಸುಂದರ ನಗರಗಳಲ್ಲಿ ಚಿತ್ರೀಕರಣಗಳನ್ನು ಮಾಡಲಾಗಿದೆ ಎಂದು ನಿರ್ದೇಶಕ ರಾಮನಾಥ್ ತಿಳಿಸಿದರು .ಮಾರ್ಚ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದರು. ಭೀಮೂಸ್ ಬ್ಯಾಂಗ್ ಬ್ಯಾಂಗ್ ಮತ್ತು ಬುದ್ಧಿವಂತ ಚಿತ್ರದ ನಂತರ ಸ್ವಂತ ನಿರ್ದೇಶನದ ಚಿತ್ರಕ್ಕೆ ಇಳಿಯುವುದಾಗಿ ಉಪೇಂದ್ರ ತಿಳಿಸಿದರು.


Click it and Unblock the Notifications