ಶಿವು-ದರ್ಶನ್ ಅಭಿಮಾನಿಗಳ ಮಾರಾಮಾರಿ
ಬೆಂಗಳೂರು: ಇದನ್ನು ಸ್ಟಾರ್ವಾರ್ ಅನ್ನುವಂತಿಲ್ಲ. ಸ್ಟಾರ್ ಅಭಿಮಾನಿಗಳ ವಾರ್ ಅನ್ನಿ ಪರವಾಗಿಲ್ಲ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರೈಸಿಂಗ್ಸ್ಟಾರ್ ದರ್ಶನ್ ಅಭಿಮಾನಿಗಳ ನಡುವೆ ಮಾರಾಮಾರಿಯಾದ್ದರಿಂದ, ಅಭಿಮಾನಿಗಳ ಗುಂಪನ್ನು ಚದುರಿಸಲು ಪೋಲೀಸರು ಲಾಠಿ ಪ್ರಹಾರ ಮಾಡಿದರು.
ನಗರದ ವಿದ್ಯಾಪೇಟೆಯ ಚಂದ್ರೋದಯ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಶಿವರಾಜ್ಕುಮಾರ್ ನಾಯಕತ್ವದ ‘ರಿಷಿ’ಯನ್ನು ತೆರವುಗೊಳಿಸಿ, ದರ್ಶನ್ ಅಭಿನಯದ ‘ಅಯ್ಯ’ಕ್ಕೆ ಅವಕಾಶ ಕಲ್ಪಿಸಲು ಹೊರಟಿದ್ದೇ ಘರ್ಷಣೆಗೆ ಪ್ರಮುಖ ಕಾರಣ. ಉಭಯ ನಾಯಕ ನಟರ ಅಭಿಮಾನಿಗಳು ಕೈಮಿಲಾಯಿಸಲು ಇಷ್ಟು ಸಾಕಾಯಿತು. ರಸ್ತೆಯ ವಾಹನಗಳಿಗೆ ಕಲ್ಲು ತೂರುವ ತನಕ ಅವರ ಆಕ್ರೋಶ ಕಡಿಮೆಯಾಗಲಿಲ್ಲ. ನೋಡುತ್ತಲೇ ಇದ್ದ ಪೋಲೀಸರು ಲಾಠಿ ಆಡಿಸುವುದು ಅನಿವಾರ್ಯವಾಯಿತು. ಲಾಠಿ ರುಚಿ ಸಿಕ್ಕ ತಕ್ಷಣ, ಸದ್ದಿಲ್ಲದೇ ಪರಿಸ್ಥಿತಿ ಹತೋಟಿಗೆ ಬಂದಿದೆಯಂತೆ.
ಸದ್ಯಕ್ಕೆ ಶಿವರಾಜ್ಕುಮಾರ್ ಅಭಿಮಾನಿಗಳು ಈ ಸಮರದಲ್ಲಿ ವಿಜಯ ಪಡೆದಿದ್ದಾರೆ. ಗಲಾಟೆಯ ಕಾರಣ, ಚಿತ್ರಮಂದಿರದ ಗಾಜು, ಕುರ್ಚಿಗಳ ರೂಪ ಇನ್ನಷ್ಟು ಕೆಡುವ ಭಯದಿಂದ ‘ಅಯ್ಯ’ ಪ್ರದರ್ಶನದ ದಿನಾಂಕವನ್ನು ಈ ಚಿತ್ರಮಂದಿರದಲ್ಲಿ ಮುಂದೂಡಲಾಗಿದೆ. ಈ ಬಗ್ಗೆ ಕುಂತು ಮಾತನಾಡಲು ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿ ನಿರ್ಧರಿಸಿದೆ.
ಕೊಸರು: ಹಳೆ ಸಿನಿಮಾಗಳಲ್ಲಿ ರಾಜ್ಕುಮಾರ್ಗೂ, ತೂಗುದೀಪ ಶ್ರೀನಿವಾಸ್ಗೂ ಹೊಡೆದಾಟ ಸಾಮಾನ್ಯ. ಈಗ ವ್ಯತ್ಯಾಸ ಅಂದ್ರೆ ಅವರ ಪುತ್ರರ ಅಭಿಮಾನಿಗಳು ಈ ವರಸೆಯನ್ನು ಮುಂದುವರೆಸಿದ್ದಾರೆ. ಅದೂ ರಿಯಲ್ಲೈಫ್ನಲ್ಲಿ!
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications