ಚನ್ನಪಟ್ಟಣಕ್ಕೆ ವಿಷ್ಣುವರ್ಧನ್ ಬರ್ತಿದಾರೆ
ಒಂದು ಕಡೆ ಕಾಂಗ್ರೆಸ್ಸಿಗರು ಅನಂತ್ಕುಮಾರ್ ವಿರುದ್ಧ ಸಿಂಹಾದ್ರಿಯ ಗರ್ಜನೆ ಕೇಳಿಸಬೇಕೆಂದು ಪ್ರಯತ್ನಿಸಿ ಸೋತು ಕೈ ತೊಳೆದುಕೊಂಡರು. ಆದರೀಗ ಇದೇ ಸಿಂಹ ಚನ್ನಪಟ್ಟಣಕ್ಕೆ ಬಂದಿದೆ. ವಿಷ್ಣು ಗಳಸ್ಯಕಂಠಸ್ಯ ಗೆಳೆಯ ಬಿ.ವಿಜಯಕುಮಾರ್ ಅವರಿಗೆ ಈ ಅಗ್ಗಳಿಕೆ ಸಲ್ಲಬೇಕು.
ಚನ್ನಪಟ್ಟಣದ ಶ್ರೀ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಏಪ್ರಿಲ್ 16 ರ ಶುಕ್ರವಾರ ಮಧ್ಯಾಹ್ನ 12 ಗಂಟೆಯ ಮೆರವಣಿಗೆ ಮತ್ತು 2 ಗಂಟೆಯ ಬಹಿರಂಗ ಸಭೆಯಲ್ಲಿ ವಿಷ್ಣುವರ್ಧನ್ ಪಾಲ್ಗೊಳ್ಲಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ಹೊರಟಿರುವ ವಿಷ್ಣುವರ್ಧನ್- ನಾನು ಯಾವುದೇ ಪಕ್ಷವನ್ನು ನೋಡುತ್ತಿಲ್ಲ. ವಿಜಯಕುಮಾರ್ ಒಬ್ಬ ಸಮರ್ಥ ವ್ಯಕ್ತಿತ್ವ ಉಳ್ಳವರು. ಹೀಗಾಗಿ ನಾನು ಅವರ ಪರ ಪ್ರಚಾರಕ್ಕೆ ಹೊರಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಷ್ಣು ಪಾಲ್ಗೊಳ್ಳುವ ಚುನಾವಣಾ ಪ್ರಚಾರದ ಕಾರ್ಯಕ್ರಮಕ್ಕೆ ಸ್ನೇಹಲೋಕ ತಂಡದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಆಗಮಿಸುವರು. ರಮೇಶ್, ಶೋಭರಾಜ್, ಅವಿನಾಶ್, ನಿರ್ಮಾಪಕ ಸೂರಪ್ಪ ಬಾಬು, ಅನಿರುದ್ಧ , ಅಭಿಜಿತ್ ಮುಂತಾದ ನಟರ ದಂಡೇ ಪ್ರಚಾರಕ್ಕೆ ಆಗಮಿಸಲಿದೆ.
ವಿಷ್ಣುವರ್ಧನ್ ಅವರ ಪ್ರೀತಿಪಾತ್ರ ವಿಜಯಕುಮಾರ್ ಅವರ ಪ್ರತಿಸ್ಪರ್ಧಿ ಕೂಡ ಸಿನಿಮಾ ವ್ಯಕ್ತಿಯೇ ಎನ್ನುವುದು ಕುತೂಹಲಕರ ಸಂಗತಿ. ಆತ ನಟ ಹಾಗೂ ನಿರ್ಮಾಪಕ ಖ್ಯಾತಿಯ ಸಿ. ಪಿ. ಯೋಗೇಶ್ವರ್. ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಹಾಗೂ ಸೈನಿಕ ಎನ್ನುವ ಸದಭಿರುಚಿಯ ಚಿತ್ರಗಳು ಯೋಗೇಶ್ವರ್ ಸಾಧನೆ. ಈ ತಾರಾ ಸಮರದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲದ ಸಂಗತಿ.
ಅಂದಹಾಗೆ, ಯೋಗೇಶ್ವರ್ ಕೂಡಾ ತಮ್ಮ ಪರ ಪ್ರಚಾರಕ್ಕೆ ಬಣ್ಣದ ಬೊಂಬೆಗಳನ್ನ್ನು ಕರೆ ತರುತ್ತಾರಾ ? ನಟಿ ಪ್ರೇಮಾ ಯೋಗೇಶ್ವರ್ ಪರ ಪ್ರಚಾರಕ್ಕೆ ಬರುತ್ತಾರಾ ? ಇಂಥದೊಂದು ಕುತೂಹಲ ಚನ್ನಪಟ್ಟಣದ ಮಂದಿಯಲ್ಲಿದೆ.


Click it and Unblock the Notifications