ವಿಜಯ್; ನಾರಾಯಣ್ ಕೃಪೆಯಿಂದ ಈಗ ಚಂಡ!
ಅಭಿಮಾನಿಗಳಿಂದ ಕಲಾ ಸಾಮ್ರಾಟರೆಂದೂ, ವಿರೋಧಿಗಳಿಂದ ರೀಮೇಕ್ ಕಿಂಗ್ ಎಂದೂ ಕರೆಸಿಕೊಳ್ಳುವ ಎಸ್.ನಾರಾಯಣ್, ಹೊಸ ಸಿನಿಮಾ ಕೆಲಸದಲ್ಲೀಗ ಸಕತ್ತು ಬಿಝಿ.
ಸಿನಿಮಾದ ಹೆಸರು ಚಂಡ! ಅದು ಚಂಡವಿರಲಾರದು ಚೆಂದವಿರಬೇಕು ಎಂದು ಬಹುತೇಕರು ಭಾವಿಸಿದ್ದರು. ಇಲ್ಲ ಚಿತ್ರದ ಹೆಸರು ಚಂಡನೇ ಎಂದು ನಾರಾಯಣ್ ಸ್ಪಷ್ಟಪಡಿಸಿದ್ದಾರೆ. ಮೊನ್ನೆಯಷ್ಟೇ ಚೆಲುವಿನ ಚಿತ್ತಾರ ಎಂಬ ಚೆಂದದ ಹೆಸರಿಟ್ಟ ನಾರಾಯಣ್, ಎಲ್ಲರೂ ಬೆಚ್ಚಿಬೀಳುವಂತಹ ಹೆಸರನ್ನು ಈಗ ಆಯ್ಕೆ ಮಾಡಿಕೊಂಡಿದ್ದಾರೆ.
ದುನಿಯಾದ ಕರಿ ಹುಡುಗ ವಿಜಯ್, ಚಿತ್ರದ ನಾಯಕ. ಶುಭ ಪೂಂಜಾ ಚಿತ್ರದ ನಾಯಕಿ. ಮೈಸೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ತಾಯಿಯ ಮಡಿಲು ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದ ನಾರಾಯಣ್, ಗಣೇಶ್ರನ್ನು ಹಾಕಿಕೊಂಡು ಚೆಲುವಿನ ಚಿತ್ತಾರ ಮಾಡಿ ನಾಲ್ಕು ಕಾಸು ಎಣಿಸುತ್ತಿದ್ದಾರೆ. ಇನ್ನೂ ನಾಲ್ಕು ಕಾಸು ಎಣಿಸಬೇಕೆಂದು ವಿಜಯ್ ಹಿಂದೆ ಬಿದ್ದಿದ್ದಾರೆ.
ಚಂಡ ಯಾವ ಚಿತ್ರದ ರೀಮೇಕು ಎಂಬುದನ್ನು ನಾರಾಯಣ್ ಸದ್ಯಕ್ಕೆ ಬಾಯಿಬಿಟ್ಟಿಲ್ಲ. ಓದುಗರು ಊಹಿಸಿ ತಿಳಿಸಿದರೆ ನಮ್ಮದೇನು ಅಡ್ಡಿಯಿಲ್ಲ.


Click it and Unblock the Notifications