ಇಟಲಿ ಚಿತ್ರೋತ್ಸವಕ್ಕೆ ಕೇರಾಫ್ ಫುಟ್ಪಾತ್
ಅಂಬರೀಷ್ ಸಹಕಾರದಿಂದ ಚಿತ್ರ ಬಿಡುಗಡೆಯಾಗಿ ಗಿನ್ನೆಸ್ ದಾಖಲೆ ಸೇರಿ ತ್ರಿಭುವನ್ ಥಿಯೇಟರ್ನಲ್ಲಿ ನೂರರ ಗಡಿ ದಾಟಿದ್ದು ಇತಿಹಾಸ.ಈಗ ಈ ದಿಟ್ಟ ಹುಡುಗನ ಬಗ್ಗೆ ಹೆಮ್ಮ ಪಡಲು ನಾಲ್ಕಾರು ಕಾರಣಗಳಿವೆ.
ಅಂಬರೀಷ್ ಸಹಕಾರದಿಂದ ಚಿತ್ರ ಬಿಡುಗಡೆಯಾಗಿ ಗಿನ್ನೆಸ್ ದಾಖಲೆ ಸೇರಿ ತ್ರಿಭುವನ್ ಥಿಯೇಟರ್ನಲ್ಲಿ ನೂರರ ಗಡಿ ದಾಟಿದ್ದು ಇತಿಹಾಸ. ಈಗ ಈ ದಿಟ್ಟ ಹುಡುಗನ ಬಗ್ಗೆ ಹೆಮ್ಮ ಪಡಲು ನಾಲ್ಕಾರು ಕಾರಣಗಳಿವೆ.
ಕೆಲ ದಿನಗಳ ಹಿಂದೆ, ಕನ್ನಡ ಚಿತ್ರಗಳು ಇನ್ನೂ ಹೆಚ್ಚಿನ ಮನ್ನಣೆ ಗಳಿಸಬೇಕೆಂದರೆ, ಹೆಚ್ಚಿನ ಗಮನ ಸೆಳೆಯಬೇಕೆಂದರೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಬೇಕು ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದರು.ಈ ಹೇಳಿಕೆಗೆ ಪ್ರಥಮ ಹೆಜ್ಜೆಯೆಂಬಂತೆ ಕಿಶನ್ನ ಕೇರಾಫ್ ಫುಟ್ಪಾತ್ ಚಿತ್ರ ಇಟಲಿಯ ಜಿಫೋನಿ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಜುಲೈ 13ರಿಂದ ಪ್ರಾರಂಭವಾಗಿರುವ ಚಿತ್ರೋತ್ಸವದ ಫಸ್ಟ್ ಸ್ಕ್ರೀನರ್ ವಿಭಾಗದಲ್ಲಿ ಗೋಲ್ಡನ್ ರಿಫಾನ್ ಪ್ರಶಸ್ತಿಗೆ ನಾಮಾಂಕಿತವಾಗಿದೆ. ಇಟಲಿಯ ಸೆಲ್ಲರ್ನೊ ಎಂಬಲ್ಲಿನ ಸಿನಿಸ್ಟಾ ಎಂಬ ವಿಶ್ವವಿಖ್ಯಾತ ಸ್ಟುಡಿಯೋದಲ್ಲಿ 16ನೇ ತಾರೀಖಿನಂದು ಕಿಶನ್ನ ಪುಟ್ಪಾತ್ ಪ್ರದರ್ಶಿತವಾಗಲಿದೆ.
ಮತ್ತೊಂದು ಆಶ್ಚರ್ಯಪಡುವ ಸಂಗತಿಯೆಂದರೆ 37 ವರ್ಷಗಳ ಜಿಫೋನಿ ಚಲನಚಿತ್ರೋತ್ಸವದ ಇತಿಹಾಸದಲ್ಲಿ, ಮಕ್ಕಳ ವಿಭಾಗದಲ್ಲಿ ಆಯ್ಕೆಯಾಗಿರುವ ಪ್ರಥಮ ಕನ್ನಡ ಚಿತ್ರ ಇದು. ಒಟ್ಟು ಆಯ್ಕೆಯಾಗಿರುವ 7 ಮಕ್ಕಳ ಚಿತ್ರಗಳ ಪೈಕಿ ಚಿಕ್ಕ ಹುಡುಗನೊಬ್ಬನು ನಿರ್ದೇಶಿಸುವ ಚಿತ್ರ ಇದೊಂದೇ! ಗೋಲ್ಡನ್ ರಿಫಾನ್ ಪ್ರಶಸ್ತಿ ತನಗೆ ಸಿಗುವುದೆಂಬ ವಿಶ್ವಾಸ ಕಿಶನ್ನಲ್ಲಿದೆ.
21ನೇ ತಾರೀಖಿಗೆ ಜಿಫೋನಿ ಚಿತ್ರೋತ್ಸವ ಮುಕ್ತಾಯವಾಗಲಿದ್ದು ಪ್ರಶಸ್ತಿ ಯಾರ ಮಡಿಲಿಗೆ ಬೀಳಲಿದೆ ಎಂಬುದು ಗೊತ್ತಾಗಲಿದೆ.
ಮತ್ತಷ್ಟು ಮನ್ನಣೆ : ತನ್ನ ಪ್ರೀತಿಯ ಚಿತ್ರವನ್ನು ಹೆಗಲ ಮೇಲೆ ಹೊತ್ತು ಮತ್ತಷ್ಟು ದೇಶಗಳನ್ನು ಸುತ್ತಲು ಕಿಶನ್ ಸಜ್ಜಾಗಿದ್ದಾನೆ. ಆಗಸ್ಟ್ 17ರಿಂದ 21ರವರೆಗೆ ದಕ್ಷಿಣ ಕೋರಿಯಾದಲ್ಲಿ ನಡೆಯಲಿರುವ ಪೂಸನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಕೇರಾಫ್ ಫುಟ್ಪಾತ್ ಆಯ್ಕೆಯಾಗಿದೆ.
ಇದಲ್ಲದೆ, ಅಂಡಮಾನ್ ಮತ್ತು ನಿಕೋಬಾರ್ನ ಫಿಲ್ಮ್ ಅಂಡ್ ಟೆಲಿವಿಷನ್ ಅಸೋಸಿಯೇಷನ್ ಕಿಶನ್ಗೆ ಯಂಗ್ ಅಚೀವರ್ ಪ್ರಶಸ್ತಿ ನೀಡಿ ಬೆನ್ನು ತಟ್ಟಿದೆ. ಆಗಸ್ಟ್ನ ಕೊನೆಯ ವಾರದಲ್ಲಿ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶಿತವಾಗಲಿದೆ. ಸುನಾಮಿ ಮಕ್ಕಳ ಸಹಾಯಾರ್ಥವಾಗಿ ಈ ಚಿತ್ರೋತ್ಸವ ನಡೆಯಲಿದೆ.
ಕೋರಿಯಾ ಮತ್ತು ಅಂಡಮಾನ್ಗೆ ಮುಂದಿನ ತಿಂಗಳು ತನ್ನ ತಂದೆ ಮತ್ತು ಚಿತ್ರದ ನಿರ್ಮಾಪಕ ಶ್ರೀಕಾಂತ್ ಮತ್ತು ಈ ಚಿತ್ರದ ಅಂತಾರಾಷ್ಟ್ರೀಯ ಹಕ್ಕು ಹೊಂದಿರುವ ಸಂಜಯ್ ಧಾರಿವಾಲ್ ಜೊತೆ ವಿಮಾನವೇರಲಿದ್ದಾನೆ ಕಿಶನ್.
ಇಷ್ಟೂ ಸಾಲದು ಎಂಬಂತೆ ಮಲಯನ್ ಭಾಷೆಗೆ ಕೂಡ ಕೇರಾಫ್ ಫುಟ್ಪಾತ್ ಡಬ್ ಆಗುತ್ತಿದೆ. ಕನ್ನಡ ಚಿತ್ರಪ್ರೇಮಿಗಳು ಸಂತಸಪಡಲು ಇನ್ನೆಷ್ಟು ಕಾರಣಗಳು ಬೇಕು?
ಎಚ್ಡಿಕೆ ಶಭಾಸ್ಗಿರಿ : ಕೇರಾಫ್ ಫುಟ್ಪಾತ್ದಂತೆ ಇನ್ನೊಂದು ಚಿತ್ರ ತಯಾರಿಸುವುದು ದೊಡ್ಡ ಮಾತಲ್ಲ, ಅದನ್ನು ಇಡೀ ದೇಶಕ್ಕೇ ತೋರಿಸಬೇಕು. ನಿನಗೇನು ಸಹಾಯ ಬೇಕೋ ಅದನ್ನು ಸರ್ಕಾರ ಮಾಡುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಕಿಶನ್ನ ಬೆನ್ನು ತಟ್ಟಿದ್ದಾರೆ .
ದೇಶಕ್ಕೆ ಯಾಕೆ ಇಡೀ ಜಗತ್ತಿಗೇ ತೋರಿಸುತ್ತೇನೆ ಎಂದು ಕಿಶನ್ ಹೊರಟಿದ್ದಾನೆ. ತನ್ನ ಪುಟ್ಟ ಕೈಯಲ್ಲಿ ಗೋಲ್ಡನ್ ರಿಫಾನ್ ಜೊತೆಗೆ ಮತ್ತಷ್ಟು ಪುರಸ್ಕಾರಗಳೊಂದಿಗೆ ಭಾರತಕ್ಕೆ ಮರಳಲಿ ಎಂದು ದಟ್ಸ್ಕನ್ನಡದ ಪರವಾಗಿ ನೀವೂ ಹಾರೈಸಿ.


Click it and Unblock the Notifications