ಜುಲೈ 16ರಿಂದ ರಾಜ್ ನೇತೃತ್ವದಲ್ಲಿ ಚಿತ್ರೋದ್ಯಮ ಬಂದ್?
ನಿರ್ಮಾಪಕರ ಹಿತಾಸಕ್ತಿ ಕಾಪಾಡಲು ವರನಟ ರಾಜ್ಕುಮಾರ್ ಬೀದಿಗಿಳಿಯುವರೇ?
ನಿರ್ಮಾಪಕರು ಮತ್ತು ನಿರ್ದೇಶಕರೇನೋ ಹೌದೆನ್ನುತ್ತಿದ್ದಾರೆ. ಪ್ರದರ್ಶಕರು ಮತ್ತು ವಿತರಕರ ಗೋಳು ಹೊಯ್ದುಕೊಳ್ಳುವಿಕೆಯಿಂದ ನಿರ್ಮಾಪಕರ ನೆಣ ಬಿದ್ದು ಹೋಗಿದೆ. ಬಾಡಿಗೆ ದರ ಕಡಿಮೆ ಮಾಡಿ ಎಂಬ ನಿರ್ಮಾಪಕರ ಅಳಲಿಗೆ ವಿತರಕರಾಗಲೀ, ಪ್ರದರ್ಶಕರಾಗಲೀ ಕಿವಿಗೊಡಲಿಲ್ಲ. ಸಭೆ ಕರೆದು ಕರೆದು ಸುಸ್ತಾಗಿ, ನೈತಿಕ ಹೊಣೆ ಹೊತ್ತ ತಲ್ಲಂ ನಂಜುಂಡಶೆಟ್ಟಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಾದಿಗೆ ರಾಜೀನಾಮೆ ವಗಾಯಿಸಿದರು. ಇದಕ್ಕೂ ವಿತರಕರ, ಪ್ರದರ್ಶಕರ ಮನ ಕರಗಲಿಲ್ಲ.
ಈಗ ನಿರ್ಮಾಪಕರು ಗೋಗರೆದು ಸುಸ್ತಾಗಿದ್ದಾರೆ. ಇನ್ನೇನಿದ್ದರೂ ಪ್ರತಿಭಟನೆಯಾಂದೇ ದಾರಿ. ಅದಕ್ಕೇ ಜುಲೈ 16, ಮಂಗಳವಾರದಿಂದ ಚಿತ್ರೋದ್ಯಮಗಳ ಚಟುವಟಿಕೆಗಳನ್ನೆಲ್ಲಾ ಬಂದ್ ಮಾಡುವ ಗಂಭೀರವಾದ ನಿರ್ಣಯ ಕೈಗೊಂಡಿದ್ದಾರೆ. ನಿರ್ಮಾಪಕರ ಸಂಘದ ಈ ನಿರ್ಣಯಕ್ಕೆ ನಿರ್ದೇಶಕರ ಸಂಘದ ಬೆಂಬಲವೂ ಇದೆ. ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳ ಬಾಡಿಗೆ ತಗ್ಗಿಸುವವರೆಗೆ ಒಂದೇ ಒಂದು ಸಿನಿಮಾ ಕೂಡ ಡಬ್ಬದಿಂದ ಹೊರಕ್ಕೆ ಬರುವುದಿಲ್ಲ ಎಂಬುದು ನಿರ್ಮಾಪಕರ ಎಚ್ಚರಿಕೆ.
ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದಾಗ ಚಿತ್ರೋದ್ಯಮ ಹೇಗೆ ಸಂಪೂರ್ಣ ಮಲಗಿತ್ತೋ ಅದೇ ಸ್ಥಿತಿಯನ್ನು ಈಗ ಪ್ರತಿಭಟನೆಯನ್ನಾಗಿ ಹೇರಲು ನಿರ್ಮಾಪಕ ಮತ್ತು ನಿದೇಶಕರ ಸಂಘಗಳು ನಿರ್ಧರಿಸಿವೆ. ತಮ್ಮ ನಾಯಕನಾಗಿ ವರನಟನನ್ನೇ ಕಣಕ್ಕಿಳಿಸುವುದು ಇವರ ಇರಾದೆ. ಅಪಹರಣ ಅಂಕದ ನಂತರ ತಮ್ಮ ಮಕ್ಕಳ ಸಂತೋಷ ಸಮಾರಂಭಗಳಲ್ಲೇ ಭಾಗಿಯಾಗದ ಅಣ್ಣಾವ್ರು ಉದ್ದಿಮೆಯ ಹಿತ ರಕ್ಷಣೆಗೆ ಮುಂದಾಗುವರೇ? ಇದು ಮಿಲಿಯನ್ ಡಾಲರ್ ಪ್ರಶ್ನೆ.ವಾರ್ತಾ ಸಂಚಯ


Click it and Unblock the Notifications