ತಾಯಿ ಅಂತಃಕರಣದ 'ಜೊತೆಯಾಗಿ ಹಿತವಾಗಿ'
ಹೊಸ ಚಿತ್ರ 'ಜೊತೆಯಾಗಿ ಹಿತವಾಗಿ' ಚಿತ್ರೀಕರಣ ಮುಗಿಸಿಕೊಂಡಿದೆ. ತಾಯಿಯ ಮಮಕಾರವೇ ಚಿತ್ರದ ಪ್ರಧಾನ ಕಥಾವಸ್ತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಇದುವರೆಗೂ ಯಾವುದೇ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿರಲಿಲ್ಲ. ಆದರೆ ಮೊನ್ನೆ ಚಿತ್ರೀಕರಣ ಮುಗಿಸಿಕೊಂಡು ಕೊನೆಯ ದಿನ ಮಾಧ್ಯಮದವರ ಮುಂದೆ ಹಾಜರಾಯಿತು. ಕುಟುಂಬ ಪ್ರಧಾನ ಕಥಾವಸ್ತುವುಳ್ಳ ಚಿತ್ರದಲ್ಲಿ ತಾಯಿ ಪಾತ್ರದ ಸುತ್ತ ಕಥೆ ಗಿರಕಿ ಹೊಡೆಯುತ್ತದೆ ಎಂಬ ಅಂಶ ತಿಳಿಸಿದರು.
ಚಿತ್ರದ ಖಳನಾಯಕ ನವೀನ್ 'ಜೊತೆಯಾಗಿ ಹಿತವಾಗಿ' ಚಿತ್ರದ ನಿರ್ಮಾಪಕರು ಸಹ. ಕೃಷ್ಣಮೂರ್ತಿ ಹಾಗೂ ಮತ್ತಿಬ್ಬರು ನಿರ್ಮಾಪಕರೊಂದಿಗೆ ನವೀನ್ ಕೈಜೋಡಿಸಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟೇಕ್, ಕ್ಯಾಮೆರಾ, ಆಕ್ಷನ್, ಕಟ್... ಎನ್ನುವ ಕೆಲಸ ಎಚ್.ಕೆ. ಶ್ರೀನಿವಾಸ್ ಅವರದು. ಶ್ರೀನಿವಾಸ್ ಅವರಿಗೆ ನಿರ್ದೇಶಕರಾದ ಭಾರ್ಗವ, ಫಣಿ ರಾಮಚಂದ್ರ ಹಾಗೂ ಮಹೇಶ್ ಸುಖಧರೆ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವವಿದೆ. ಶ್ರೀನಿವಾಸ್ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಇದು.
ಇನ್ನು ಚಿತ್ರದ ತಾರಾಗಣದಲ್ಲಿ ಫ್ರೆಶ್ ಆಗಿ ಕಾಣುವ ಚಂದನ್ ಹಾಗೂ ಸವಿಸವಿ ನೆನಪು, ಬಂಧು ಬಳಗ ಚಿತ್ರಗಳ ನಾಯಕಿ ತೇಜಸ್ವಿನಿ ಇದ್ದಾರೆ. ಈ ಚಿತ್ರದ ಮೂಲಕ ಚಂದನ್ ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪರಿಚಯವಾಗುತ್ತಿದ್ದಾರೆ. ಈ ಹಿಂದೆ ತಂಗಿಯ ಪಾತ್ರಗಳಿಗೆ ಜೀವ ತುಂಬುತ್ತಿದ್ದ ನಟಿ ತಾರಾ ಈ ಚಿತ್ರದಲ್ಲಿ ತಾಯಿಯ ಪಾತ್ರಕ್ಕೆ ಬಡ್ತಿ ಪಡೆದಿದ್ದಾರೆ. ಚಿತ್ರದ ಮತ್ತೊಂದು ಪಾತ್ರದಲ್ಲಿ ನಟ ರಾಮಕೃಷ್ಣ ನಟಿಸಿದ್ದಾರೆ. ಸಂಗೀತ ಡ್ರಮ್ಮರ್ ದೇವಾ ಅವರದು. ಕ್ಯಾಮೆರಾ ಕಣ್ಣು ವಿನೋದ್ ಭಾರತಿ ಅವರದು.
ಪ್ರೇಕ್ಷಕನನ್ನು ಹಿಡಿದಿಡುವ ಪ್ರಧಾನ ಅಂಶ ತಾಯಿ -ಮಗನ ನಡುವಿನ ವಾತ್ಸಲ್ಯ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್. ಚಿತ್ರದ ಹಾಡುಗಳನ್ನು ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರಿಕರಿಸಿದ್ದೇವೆ. ಚಿತ್ರೀಕರಣಕ್ಕಾಗಿ ಬೆಂಗಳೂರು, ಮೂಡಿಗೆರೆ, ಸಕಲೇಶಪುರ ಎಂದು ಸುತ್ತಿ ಬಂದಿದೆ ಚಿತ್ರತಂಡ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications