ಒಲವೇ ಜೀವನ ಸಾಕ್ಷಾತ್ಕಾರ ಅಲ್ಲ ಲೆಕ್ಕಾಚಾರ!
ಲೆಕ್ಕಾಚಾರ ಅಂದ್ರೆ ಪ್ರಣಯರಾಜ ಶ್ರೀನಾಥ್ ಮತ್ತು ಆರತಿ ಅಭಿನಯದ ಶುಭಮಂಗಳ ಚಿತ್ರದ ನಾಕೊಂದ್ಲ ನಾಕು... ಹಾಡು ನೆನಪಾಗುತ್ತದೆ. ಆ ಚಿತ್ರದಲ್ಲಿ ಅವರಿಬ್ಬರ ಸ್ವಾಭಿಮಾನದ ಲೆಕ್ಕಾಚಾರ ಅಷ್ಟು ಆಪ್ಯಾಯಮಾನವಾಗಿತ್ತು. ತಾಯಿಯ ಮಮತೆ,ಪ್ರೀತಿ ಬಿಟ್ಟರೆ ಈ ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಕೊಟ್ಟು ತೆಗೆದುಕೊಳ್ಳುವ ಲೆಕ್ಕಾಚಾರಗಳಡಿ ಬರುತ್ತವೆ. ಒಲವೇ ಜೀವನ ಸಾಕ್ಷಾತ್ಕಾರ ಅದು ಇಲ್ಲದಿದ್ದರೆ ಜೀವನ ಸಿಕ್ಕಾಪಟ್ಟೆ ಖಾರ!
ಇಷ್ಟೆಲ್ಲಾ ಪೀಠಿಕೆಗೆ ಕಾರಣ, ಏ.14 ಶ್ರೀರಾಮನವಮಿ ಹಾಗೂ ಅಂಬೇಡ್ಕರ್ ಜಯಂತಿ ದಿನ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರ ಸೆಟ್ಟೇರಿದೆ. ಚಿತ್ರದ ಹೆಸರು 'ಒಲವೆ ಜೀವನ ಲೆಕ್ಕಾಚಾರ'. ಬೆಂಗಳೂರಿನ ಜೆ.ಪಿ.ನಗರದ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭವಿತ್ತು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಕ್ಲಾಪ್ ಮಾಡುವ ಮೂಲಕ ಚಿತ್ರ ಸೆಟ್ಟೇರಿದೆ.
ಲೆಕ್ಕಾಚಾರದ ಚಿತ್ರಕಥೆಯನ್ನು ಸಿದ್ಧಪಡಿಸಲು ನಾಗತಿಹಳ್ಳಿ ಚಂದ್ರಶೇಖರ್ ಪತ್ರಕರ್ತ ಜೋಗಿ ಅಲಿಯಾಸ್ ಎಚ್.ಗಿರೀಶ್ ರಾವ್ ಅವರ ಸಹಾಯ ಸಹಕಾರಗಳನ್ನು ಪಡೆದಿದ್ದಾರೆ. ಹಲವು ವರ್ಷಗಳ ಹಿಂದೆ ಪ್ರಕಟವಾದ ನಾಗತಿಹಳ್ಳಿ ಅವರ 'ಭೂಮಿ ಗುಂಡಾಗಿದೆ' ಎಂಬ ಪುಸ್ತಕದ ಕಥೆ ಚಿತ್ರವಾಗುತ್ತಿದೆ. ಇದೊಂದು ವಿವಾದಾತ್ಮಕ ಪುಸ್ತಕವಾಗಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು.
ಶ್ರೀನಗರ ಕಿಟ್ಟಿ, ಅನ್ವಿತಾ (ಹೊಸ ಪರಿಚಯ), ರಂಗಾಯಣ ರಘು ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದ ಐದು ಹಾಡುಗಳನ್ನು ಬೆಂಗಳೂರು, ಮೈಸೂರು, ಚಿತ್ರದುರ್ಗ ಜಿಲ್ಲೆಗಳ ಸುಂದರ ಪರಿಸರಗಳಲ್ಲಿ ಚಿತ್ರಿಸಲಾಗುತ್ತದೆ. ಐದರಲ್ಲಿ ಮೂರಕ್ಕೆ ನಾಗತಿಹಳ್ಳಿ ಅವರ ಸಾಹಿತ್ಯವಿದೆ. ಇನ್ನೆರಡರಲ್ಲಿ ಒಂದು ಪುರಂದರದಾಸರ ಕೀರ್ತನೆ ಮತ್ತೊಂದು ಬಿ.ಆರ್.ಲಕ್ಷಣರಾವ್ ಅವರ ಪ್ರೀತಿ ಏನೆಂದರೆ ಹಾಳು ಬಾವಿ...! ಚಿತ್ರದಲ್ಲಿ ಒಲವೆ ಜೀವನ ಸಾಕ್ಷಾತ್ಕಾರ ಹಾಡು ಮನೋಮೂರ್ತಿ ಅವರ ಹೊಸ ಟ್ಯೂನ್ನಲ್ಲಿ ಮೂಡಿಬರಲಿದೆ.
ಇನ್ನು ಲೆಕ್ಕಾಚಾರ ಚಿತ್ರದ ನಾಯಕಿ ಬಗ್ಗೆ ಹೇಳಬೇಕೆಂದರೆ, ಕೆಲಕಾಲ ಲಂಡನ್ ಒಂದಷ್ಟು ದಿನ ಮೈಸೂರು, ಹೈದರಾಬಾದಿನಲ್ಲಿದ್ದವರು. ಪ್ರಸ್ತುತ ಕುವೈತ್ನಲ್ಲಿದ್ದಾರೆ. ಇವರ ತಂದೆ ವಿಶ್ವಸಂಸ್ಥೆಯ ನೌಕರ. ಈ ರೀತಿಯ ಅದ್ಬ್ಬುತ ಪಾತ್ರದಲ್ಲಿ ಈ ಹಿಂದೆ ನಾನು ನಟಿಸಿಲ್ಲ.ನಾಗತಿಹಳ್ಳಿ ಚಂದ್ರಶೇಖರ್ ಉತ್ತಮ ಪ್ರೇಮಕಥಾ ವಸ್ತುವುಳ್ಳ ಚಿತ್ರವನ್ನು ಕೊಡಲಿದ್ದಾರೆ ಎನ್ನುತ್ತಾರೆ ಶ್ರೀನಗರ ಕಿಟ್ಟಿ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications