'ಆಪ್ತರಕ್ಷಕ' ನೋಡಿ ಗದ್ಗದಿತರಾದ ರಜನಿ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಕಟ್ಟಕಡೆಯ ಹಾಗೂ 200ನೇ ಚಿತ್ರ 'ಆಪ್ತರಕ್ಷಕ'. ಈ ಚಿತ್ರದ ವಿಶೇಷ ಪ್ರದರ್ಶನವನ್ನು ನೋಡಿದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣೀರಾದ ಘಟನೆ ಚೆನ್ನೈನಲ್ಲಿ ನಡೆದಿದೆ. 'ಆಪ್ತರಕ್ಷಕ' ಬಗ್ಗೆ ರಜನಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಚೆನ್ನೈನ ಎವಿಎಂ ಸ್ಟುಡಿಯೋದಲ್ಲಿ ಆಪ್ತರಕ್ಷಕ ಚಿತ್ರದ ಎರಡು ವಿಶೇಷ ಪ್ರದರ್ಶನವನ್ನು ನಿರ್ದೇಶಕ ಪಿ ವಾಸು ಆಯೋಜಿಸಿದ್ದರು. ಒಂದು ಪ್ರದರ್ಶನ ರಜನಿಕಾಂತ್ ಅವರಿಗಾದರೆ ಮತ್ತೊಂದು ಶಿವಾಜಿ ಗಣೇಶನ್ ಅವರ ಕುಟುಂಬಕ್ಕಾಗಿ.
ಆಪ್ತರಕ್ಷಕ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕುತೂಹಲ ತಡೆಯಲಾಗದೆ ರಜನಿ ಕುರ್ಚಿಯಿಂದ ಎದ್ದು ನಿಂತರಂತೆ. ಬಳಿಕ ಚಿತ್ರದ ನಿರ್ದೇಶಕ ವಾಸು ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟರಂತೆ. ಹಾಗೆಯೇ ಶಿವಾಜಿ ಪ್ರಭು ಅವರು ಭಾವುಕರಾಗಿ ವಾಸು ಅವರನ್ನು ಅಪ್ಪಿಕೊಂಡ ಪ್ರಸಂಗವೂ ನಡೆದಿದೆ ಎನ್ನುತ್ತವೆ ಮೂಲಗಳು.
'ಆಪ್ತರಕ್ಷಕ' ಚಿತ್ರ ತಮಿಳಿನಲ್ಲಿ 'ಚಂದ್ರಮುಖಿ ಭಾಗ 2' ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರಜನಿಕಾಂತ್ ಚಿತ್ರದ ನಾಯಕ ನಟ ಎಂಬುದು ಅಷ್ಟೇ ಸತ್ಯ. ಅಂದಹಾಗೆ ಆಪ್ತರಕ್ಷಕ ಚಿತ್ರ ಫೆಬ್ರವರಿ 19ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. 'ಆಪ್ತಮಿತ್ರ' ಚಿತ್ರದ ಮುಂದಿನ ಭಾಗ 'ಆಪ್ತರಕ್ಷಕ' ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆಪ್ತರಕ್ಷಕ ಚಿತ್ರದ ನಾಯಕಿಯರು ಭಾವನಾ, ಸಂಧ್ಯಾ, ಲಕ್ಷ್ಮಿ ಗೋಪಾಲಸ್ವಾಮಿ, ವಿಮಲಾ ರಾಮನ್.


Click it and Unblock the Notifications











