ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಪುಣ್ಯವಂತ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 49ನೇ ಹುಟ್ಟುಹಬ್ಬದದಿನ ಹಲವಾರು ಚಿತ್ರಗಳು ಘೋಷಣೆಯಾಗಿವೆ. ಇವುಗಳಲ್ಲಿ ಪುಣ್ಯವಂತ ಸನ್ ಆಫ್ ಭಾಗ್ಯವಂತ ಚಿತ್ರವೂ ಒಂದು. ಗೀತ ಸಾಹಿತಿ ಕಮ್ ಚಿತ್ರ ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.
ಚಿತ್ರ ನಿರ್ದೇಶನದ ಜೊತೆಗೆ ಕತೆ, ಚಿತ್ರಕತೆಯನ್ನೂ ನಾಗೇಂದ್ರ ಪ್ರಸಾದ್ ಅವರು ಹೆಣೆದಿರುವುದು ವಿಶೇಷ. ಈಗಾಗಲೆ ನಾಗೇಂದ್ರ ಪ್ರಸಾದ್ ನಿರ್ದೇಶನದ ಮತ್ತೊಂದು ಚಿತ್ರ ವಿನಾಯಕ ಗೆಳೆಯರ ಬಳಗ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮುನಿರಾಜು ಮತ್ತ್ತು ನಾಗರಾಜು ಇವರಿಬ್ಬರು ಪುಣ್ಯವಂತ ಚಿತ್ರ ನಿರ್ಮಾಪಕರು. ಇದೊಂದು ಅವಿಭಕ್ತ ಕುಟುಂಬವೊಂದರ ಕತೆ. ಚಿತ್ರದಲ್ಲಿ ಶಿವಣ್ಣನ ತಂದೆಯಾಗಿ ದಕ್ಷಿಣದ ದೊಡ್ಡ ನಟರೊಬ್ಬರು ಅಭಿನಯಿಸಲಿದ್ದಾರೆ ಎಂದಿದ್ದಾರೆ ನಾಗೇಂದ್ರ ಪ್ರಸಾದ್. ಆದರೆ ಅವರಾರು ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ಸಮಯ ಕಾಯಬೇಕು.
ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ವಿ ಹರಿಕೃಷ್ಣ ಅವರ ಸಂಗೀತ ಲಹರಿ ಚಿತ್ರಕ್ಕಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಈ ಚಿತ್ರ ಈ ವರ್ಷ್ಯಾಂತದ ವೇಳೆಗೆ ತೆರೆಗೆ ಬರುವ ಸಾಧ್ಯತೆಗಳಿವೆ. ಪುಣ್ಯವಂತ ಚಿತ್ರದ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸುತ್ತಿರಿ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











