ರಾಜ್ ಕಿಶೋರ್ ಕುಟುಂಬಕ್ಕೆ ವಿಷ್ಣುವರ್ಧನ್ ಧನಸಹಾಯ
ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರ ನಿರ್ದೇಶಕ ರಾಜ್ ಕಿಶೋರ್ ಅವರ ಕುಟುಂಬಕ್ಕೆ 25 ಸಾವಿರ ರು. ಚೆಕ್ ನೀಡಿ ವಿಷ್ಣುವಿರ್ಧನ್ ಮಾನವೀಯತೆ ಮೆರೆದಿದ್ದಾರೆ. ರಾಜ್ ಕಿಶೋರ್ ಅವರ ಮಗಳಲ್ಲೊಬ್ಬಳಾದ ದೀಪಾ ಅವರಿಗೆ ಚೆಕ್ ನೀಡಿದಾಗ ಗದ್ಗದಿತರಾತ ವಿಷ್ಣು ರಾಜ್ ಕಿಶೋರ್ ಸಾವಿಗಾಗಿ ಕಂಬನಿ ಮಿಡಿದರು. ದೀಪಾ ಕೂಡ ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ಕಣ್ಣೀರು ಹಾಕಿದರು.
ಪದ್ಮಾಲಯ ಆರ್ಟ್ನ ಪ್ರಥಮ ಚಿತ್ರ 'ಬಾ ಬೇಗ ಚಂದಮಾಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ವಿಷ್ಣು ರಾಜ್ ಕಿಶೋರ್ ಕುಟುಂಬಕ್ಕೆ ನೀಡಿದಾಗ ಮಲ್ಲೇಶ್ವರದ ರಿಜಾಯ್ಸ್ ಡಿಜಿಟಲ್ ಆಡಿಟೋರಿಯಂನಲ್ಲಿ ಭಾವುಕತೆಯ ವಾತಾವರಣ ಸೃಷ್ಟಿಯಾಗಿತ್ತು.
ರಾಜ್ ಕಿಶೋರ್ ಅವರ ಪ್ರಥಮ ನಿರ್ದೇಶನದ ಚಿತ್ರವಾದ 'ಆಸೆಯ ಬಲೆ' ಚಿತ್ರದಲ್ಲಿ ನಟಿಸಿದ್ದ ವಿಷ್ಣು ರಾಜ್ ಕಿಶೋರ್ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ವಿಷ್ಣು ಅಭಿನಯದ 'ನೀ ಬರೆದ ಕಾದಂಬರಿ' ಮತ್ತು 'ಆಪ್ತಮಿತ್ರ' ಚಿತ್ರದಲ್ಲಿಯೂ ದ್ವಾರಕೀಶ್ ಸಹ ನಿರ್ದೇಶಕರಾಗಿ ವಿಷ್ಣುವಿನೊಂದಿಗೆ ರಾಜ್ ಕಿಶೋರ್ ದುಡಿದಿದ್ದರು. ರಾಜ್ ಕಿಶೋರ್ ಅವರು ವಿಷ್ಣುವರ್ಧನ್ ಅವರ ಫೆವರಿಟ್ ನಿರ್ದೇಶಕರಲ್ಲೊಬ್ಬರಾಗಿದ್ದರು.
ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಬೆವರು ಸುರಿಸಿದ್ದರೂ ರಾಜ್ ಕಿಶೋರ್ ಅವರಿಗೆ ಅರ್ಹ ಫಲ ಮತ್ತು ತಕ್ಕ ಪ್ರಾಮುಖ್ಯತೆ ದೊರೆಯಲಿಲ್ಲ ಎಂದು ವಿಷ್ಣು ವಿಷಾದಿಸಿದರು. ರಾಜ್ ಕಿಶೋರ್ ಕುಟುಂಬಕ್ಕೆ ದುಃಖ ಭರಿಸುವ ಧೈರ್ಯ ಬರಲಿ ಎಂದು ಆಶಿಸಿದರು.
ಏಪ್ರಿಲ್ 9ರಂದು ಮಹಾರಾಷ್ಟ್ರದ ಶಿರಡಿಯಲ್ಲಿ ಹೃದಯಾಘಾತದಿಂದ ರಾಜ್ ಕಿಶೋರ್ ನಿಧನರಾದರು. ಅಂಬರೀಷ್, ಪ್ರಭಾಕರ್, ಜಗ್ಗೇಶ್ ಮುಂತಾದವರೊಡನೆ ಚಿತ್ರ ನಿರ್ದೇಶಿಸಿದ್ದ ರಾಜ್ ಕಿಶೋರ್ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದರು. ರಾಜ್ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
(ದಟ್ಸ್ಕನ್ನಡ ಸಿನಿವಾರ್ತೆ)
ಪೂರಕ ಓದಿಗೆ
ಹಿರಿಯ ನಿರ್ದೇಶಕ ರಾಜ್ ಕಿಶೋರ್ ನಿಧನ


Click it and Unblock the Notifications