ನಿಜ! ಜಗ್ಗೇಶ್ ನವರಸನಾಯಕ ಅಲ್ಲ...
'ಶ್ವೇತಗುಲಾಬಿ" ಚಿತ್ರದ ಮೂಲಕ ಚಿತ್ರರಂಗಕ್ಕೆ ಹಾಸ್ಯನಟನಾಗಿ ಪ್ರವೇಶಿಸಿ, ಕ್ರಮೇಣವಾಗಿ ಒಂದೊಂದೆ ಪರದೆ ಮೇಲೇರಿದಂತೆ 'ನವರಸ "ನಾಯಕನಾದ. ಚಿತ್ರ ರಸಿಕರಿಗೆ ಮಾತಿನ ಮೋಡಿ ಮಾಡಿ ಗುರುತಿಸಿಕೊಂಡ. ತನ್ನ ಪ್ರಖ್ಯಾತಿಯ ಜಾಡು ಹಿಡಿದು, ಕಾಂಗೈ ಪ್ರವೇಶಿಸಿದ. ಪ್ರಸ್ತುತ 'ತುರುವೆಕೆರೆ"ಯತ್ತ ಕಣ್ಣಿಟ್ಟಿರುವ ಈ ನವರಸ ನಾಯಕ, ಜಗ್ಗೇಶ್ ಗಾಂಧಿನಗರದ ನಂಟನ್ನು ಬಿಡಲೊಲ್ಲರು. ಇದನ್ನು ನಿಜ ಎಂದದ್ದು ಅವರ ಹೊಸ ಪರಿಯ ಹೊಸ ಚಿತ್ರ 'ನಿಜ".
ನಟರು ಪ್ರಬುದ್ಧರಾದಂತೆ ಇಮೇಜ್ ಬದಿಗೊತ್ತಿ ನಟನೆಗೆ ಪ್ರಾಮುಖ್ಯತೆ ಕೊಡಲು ಆರಂಭಿಸುತ್ತಾರೆ. ಬಹುಶಃ ಜಗ್ಗೇಶ್ಗೆ ಹೀಗೆ ಅನ್ನಿಸಿದಂತಿದೆ. 'ಅಣ್ಣಾ ...ಕಡ್ಲೆಕಾಯಿ, ಕಡ್ಲೆಕಾಯಿ... " ಕಾಮಿಡಿ ಪಾತ್ರಗಳ ಬದಲಾಗಿ ಈ ಚಿತ್ರದಲ್ಲಿ ವಿಭಿನ್ನವಾಗಿ ನಟಿಸಲಿದ್ದಾರೆ. 'ನಿಜ"ದ ಪ್ರತಿಯಾಂದು ಹಂತದಲ್ಲೂ ಅವರ ಪಾತ್ರ ಬದಲಾಗುತ್ತಾ ಹೋಗಿ ಕೊನೆಯಲ್ಲಿ ಜಗ್ಗೇಶ್ ಒಬ್ಬ ನಟ ಹೌದು-ಅಲ್ಲವೇ ಎಂಬುದನ್ನು ತಿಳಿಸಲಿದೆ ಎನ್ನು ವುದು ಅವರ ಸ್ವ-ಅಭಿಮಾನದ ಮಾತು. ಪ್ರೇಕ್ಷಕರು ಒಪ್ಪಿ-ಅಪ್ಪಿಕೊಳ್ಳುತ್ತಾರೆ ಎಂಬುದು ಅವರ ಆಶಯ.
ಲೇಖಕ, ಸಂಭಾಷಣೆಗಾರ, ನಿರ್ದೇಶಕ ಕೆ.ವಿ. ರಾಜು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಅದ್ದರಿಂದ ಚಿತ್ರದಲ್ಲಿ ಜಗ್ಗೇಶ್ ಉಲಿದಂತೆ ಏನಾದರು ವಿಶೇಷವಿರಬಹುದು ಎಂದು ಅನ್ನಿಸುತ್ತದೆ. 26 ದಿನಗಳಲ್ಲಿ 65 ಲಕ್ಷದಲ್ಲಿ ಚಿತ್ರ ಮಾಡಿ ಮುಗಿಸಿದ್ದೇನೆ ಎಂದ ರಾಜು ತಮ್ಮ ದುಬಾರಿ ನಿರ್ದೇಶಕ ಎಂಬ ಪೊರೆ ಕಳಚಲು ಪ್ರಯತ್ನಿಸಿದ್ದಾರೆ. 'ಬೊಂಬಾಟ್ ಹುಡುಗ" ಚಿತ್ರದ ಬಳಿಕ ಈಗ ಮತ್ತೆ ಈ ನಟ-ನಿರ್ದೇಶಕ ಜೋಡಿ ಒಂದಾಗಿದೆ.
ಚಿತ್ರಕತೆ ಯಾರ ಚರಿತ್ರೆ ಅಲ್ಲದಿದ್ದರೂ ಅದೇ ರೀತಿ ಗೋಚರಿಸುತ್ತದೆ ಎಂದು ರಾಜು ಹೇಳಿದರು. ಒಬ್ಬ ಪೋಲಿಸ್ ಅಧಿಕಾರಿಯ ಮೇಲೆ ಕತೆ ನಿಂತಿದೆ. ಕೆ.ರವಿಚಂದ್ರ ಮತ್ತು ಕೆ.ಮಂಜುನಾಥ್ ಈ ಚಿತ್ರ ನಿರ್ಮಿಸಿದ್ದಾರೆ. ಎಪ್ರಿಲ್ನಲ್ಲಿ ತೆರೆಕಾಣಲಿರುವ 'ನಿಜ"ಚಿತ್ರದ ಚಿತ್ರೀಕರಣ ನಿಜ ಹೇಳ್ಬೇಕು ಅಂದ್ರೆ... ಮುಗಿದಿದೆ.


Click it and Unblock the Notifications