ಬೆಂಗಳೂರಲ್ಲಿ ಎಂ.ಎಸ್.ಸತ್ಯು ಕಿರುಚಿತ್ರ ಕಮ್ಮಟ
ಬೆಂಗಳೂರು : ಸಿನಿಮಾ ತೆಗೆಯುವ ಕನಸುಗಾರ ನಿಮ್ಮೊಳಗಿದ್ದರೆ ಅದಕ್ಕೆ ಎಂ.ಎಸ್.ಸತ್ಯು ಸಾಣೆ ಹಿಡಿಯಲಿದ್ದಾರೆ. ಕಿರುಚಿತ್ರಗಳ ಹೇಗೆ ಮಾಡೋದು ಎಂಬ ಕುರಿತು ಸತ್ಯು ಹತ್ತು ದಿನಗಳ ಕಮ್ಮಟ ನಡೆಸಲಿದ್ದಾರೆ.
ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಮೇ.5ರಿಂದ ಕಮ್ಮಟ ಶುರುವಾಗಲಿದೆ. ಸ್ಕಿೃಪ್ಟ್ ಬರೆಯುವುದರಿಂದ ಹಿಡಿದು ಶೂಟಿಂಗ್, ಎಡಿಟಿಂಗ್ ಮತ್ತು ಸೌಂಡ್ ಮಿಕ್ಸಿಂಗ್ವರೆಗೆ ಸತ್ಯು ಪಾಠ ಮಾಡಲಿದ್ದಾರೆ ಎಂದು ಭಾರತೀಯ ವಿದ್ಯಾ ಭವನದಲ್ಲಿನ ಕಮ್ಮಟ ನಿರ್ದೇಶಕ ಕೆ.ಸಿ.ನರಸಿಂಹಯ್ಯ ಹೇಳಿದರು.
ಎಚ್.ಬಿ.ಕಾಲೇಜ್ ಆಫ್ ಕಮ್ಯುನಿಕೇಷನ್ ಅಂಡ್ ಮ್ಯಾನೇಜ್ಮೆಂಟ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಟೆಕ್ನಾಲಜಿ ಸಹಯೋಗದಲ್ಲಿ ಕಮ್ಮಟ ಆಯೋಜಿತವಾಗಿದೆ. ಜಾನಪದ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರನ ಕಥೆ ಆಧರಿಸಿದ ‘ಕನ್ನೇಶ್ವರ ರಾಮ’ ಮತ್ತು ತುರ್ತು ಪರಿಸ್ಥಿತಿಯ ವಿಡಂಬನೆಯ ವಸ್ತುವುಳ್ಳ ‘ಚಿತೆಗೂ ಚಿಂತೆ’ಯಂಥಾ ಕನ್ನಡ ಚಿತ್ರಗಳನ್ನು ನಾಡಿಗೆ ಕೊಟ್ಟಿರುವ ಸತ್ಯು ಅವರ ‘ಗರಂ ಹವಾ’ ಭಾರತೀಯ ಸಿನಿಮಾದ ಮೈಲಿಗಲ್ಲುಗಳಲ್ಲೊಂದು.
1960ರ ದಶಕದಲ್ಲಿ ಪೀಪಲ್ಸ್ ಥಿಯೇಟರ್ ಸೋಸಿಯೇಷನ್ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಸತ್ಯು ಅವರಿಗೆ ಚಿತ್ರರಂಗದ ಪರಿಭಾಷೆ ಕರಗತ. ಕಮ್ಮಟದಲ್ಲಿ ಸತ್ಯು ಅವರಲ್ಲದೆ ಸಿ.ಕೆ.ಎಂ.ರಾವ್ ಮತ್ತು ರವೀಂದ್ರನಾಥ್ ಸಿನಿಮಾಟೋಗ್ರಫಿ ತಂತ್ರಜ್ಞಾನವನ್ನು ಹೇಳಿಕೊಡಲಿದ್ದಾರೆ.
ಕಮ್ಮಟಕ್ಕೆ 5 ಸಾವಿರ ರುಪಾಯಿ ಶುಲ್ಕ ನಿಗದಿಯಾಗಿದೆ. ಪ್ರತಿನಿತ್ಯ ಸಂಜೆ 4.30ರಿಂದ ರಾತ್ರಿ 8.30ವರೆಗೆ ತರಗತಿಗಳು ನಡೆಯಲಿವೆ. ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ (080) 2201959 ನಂಬರಿಗೆ ಫೋನಾಯಿಸಿ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications