ಮಗಳ ಮದುವೆಯನ್ನು ವೈಭವದಿಂದ ಮಾಡಬೇಕು,
ದ್ವಂದ್ವಾರ್ಥದ ಸಂಭಾಷಣೆಗೆ ಒಂದು ಕಾಲದಲ್ಲಿ ಹೆಸರಾಗಿದ್ದ ಉಮಾಶ್ರೀ ಮಾತಿನಲ್ಲಿ ಇದೀಗ ಸಹಸ್ರಾರ್ಥ. ಈಕೆ ಈಗ ಬರಿಯ ರಂಗಭೂಮಿ ನಟಿಯಲ್ಲ. ಚಿತ್ರನಟಿಯೂ ಅಲ್ಲ. ವಿಧಾನ ಪರಿಷತ್ ಸದಸ್ಯೆ. ಬದುಕಿನ ನೂರೆಂಟು ಹಿಂಸೆಗಳಿಗೆ ಮಣಿದು ವೃತ್ತಿ ರಂಗಭೂಮಿಯ ಪಾಲಾಗಬೇಕಾಗಿದ್ದ ಉಮಾಶ್ರೀ ಸ್ವಂತ ಪರಿಶ್ರಮದಿಂದ ಏರಿದ ಎತ್ತರ ಎಂಥವರನ್ನೂ ಬೆರಗುಗೊಳಿಸುವಂಥಾದ್ದು . ಬದುಕೇ ಹಾಗೆ!
ಇಂಥಾ ಉಮಾಶ್ರೀಗೆ ನೂರು ಪ್ರಶ್ನೆ ಕೇಳಿದರೂ ಉತ್ತರ ಶತಃಸಿದ್ಧ . ಆದರೆ ಕೇಳಿದ್ದು ನಾಲ್ಕೇ ನಾಲ್ಕು ಪ್ರಶ್ನೆ :
ಈ ಹೊಲಸು ರಾಜಕೀಯ ಬೇಕಿತ್ತಾ ?
ರಾಜಕೀಯ ಹೊಲಸು ಅಂಥ ಯಾರು ಹೇಳಿದರು? ಹೊಲಸು ಮಂದಿ ಇದ್ದ ಮಾತ್ರಕ್ಕೆ ಇಡಿ ರಾಜಕೀಯವೇ ಹೊಲಸಲ್ಲ . ರಾಜಕೀಯ ನನಗೆ ಅನಿವಾರ್ಯವಾಗಿತ್ತು . ವಿಧಾನ ಪರಿಷತ್ ಸದಸ್ಯತ್ವ ಕನಸು ಮನಸಿನಲ್ಲೂ ಎಣಿಸದ ಸ್ಥಾನ. ಅದಾಗಿ ಬಂತು. ಸ್ವೀಕರಿಸಿದ್ದೇನೆ.
ಹೇಗಿದ್ದೆ ಹೇಗಾದಿ ಗೊತ್ತಾ ?
ಗೊತ್ತು . ನಾನು ಎಲ್ಲೇ ಇದ್ದರೂ ವಾಸ್ತವವನ್ನು ಮರೆಯುವವಳಲ್ಲ . ನನ್ನ ಕಾಲು ಯಾವತ್ತೂ ನೆಲದ ಮೇಲೆಯೇ ಇರುತ್ತದೆ. ಇಂದು ಈ ಎಲ್ಲಾ ಗೌರವಗಳು ಬಂದಿವೆ. ಹಾಗಂತ ಹಿಗ್ಗುವುದಿಲ್ಲ . ನಾಳೆ ಎಲ್ಲವೂ ಸೂರೆ ಹೋಗಬಹುದು. ಆವಾಗ ಹಾಗಂತ ಕೊರಗುವುದೂ ಇಲ್ಲ .
ನಿಮ್ಮ ಈ ಮಟ್ಟದ ಏಳಿಗೆಯನ್ನು ಕಂಡು ಕರುಬುವವರಿಲ್ಲವೇ?
ಇದ್ದಾರೆ. ಹಾಗೆಯೇ ಖುಷಿ ಪಡುವವರೂ ಇದ್ದಾರೆ. ಬದುಕು ಪೂರ್ತಿ ಕಾಲೆಳೆದ ಮಂದಿ ನನ್ನ ಈ ಮಟ್ಟದ ಏಳಿಗೆಯನ್ನು ಕಂಡು ಅಸೂಯೆ ಪಡುತ್ತಾರೆ. ಆದರೆ ಈ ಅಸೂಯೆ ನನ್ನನ್ನು ಸುಡುವುದಿಲ್ಲ .
ಹೋಗಲಿ, ನಿಮ್ಮ ಮಗಳ ಮದುವೆ ಹೇಗಾಯ್ತು ?
ಇದು ನಿಜವಾದ ಪ್ರಶ್ನೆ . ನನ್ನ ಮಗಳನ್ನು ಓದಿಸಿ ಡಾಕ್ಟರ್ ಆಗಿಸಿದೆ. ಒಳ್ಳೆಯ ಕಡೆ ಸಂಬಂಧ ಬೆಳೆಸಿ ಮದುವೆ ಮಾಡಿದೆ. ಆಕೆಯ ಮದುವೆಗೆ ಬಂದಿದ್ದರೆ ನಿಮಗೆ ಅದರ ವೈಭವ ಗೊತ್ತಾಗುತ್ತಿತ್ತು .
ಮೂರು ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದೆ . ಐದಾರು ಸಾವಿರ ಮಂದಿ ಬಂದರು. ಅಡುಗೆಯವರು ಗೊಣಗದೇ ಊಟ ಬಡಿಸಿದರು. ಎಲ್ಲರಿಗೂ ನಾನು ಋಣಿ, ನಾ ಎಲ್ಲರಿಗೂ ಋಣಿ.
(ವಿಜಯ ಕರ್ನಾಟಕ)


Click it and Unblock the Notifications