ಕಾಸರವಳ್ಳಿ, ತಾರಾ, ಶೇಷಾದ್ರಿಗೆ ರಾಜ್ಯದ ವಿಶೇಷ ಗೌರವ
ಬೆಂಗಳೂರು : ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಕಲಾವಿದರನ್ನು ಶನಿವಾರ ನಡೆಯಲಿರುವ ರಾಜ್ಯಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರ್ಕಾರ ಗೌರವಿಸಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಸಚಿವ ಬಿ.ಶಿವರಾಂ, ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ‘ಹಸೀನಾ’ ಚಲನಚಿತ್ರ ನಿರ್ಮಾಪಕರಿಗೆ 3ಲಕ್ಷ ರೂಪಾಯಿ ಹಾಗೂ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ 30ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ ಎಂದರು.
ಈ ಚಿತ್ರದಲ್ಲಿ ಅಭಿನಯಿಸಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿರುವ ತಾರಾಗೆ 1ಲಕ್ಷ ರೂಪಾಯಿ ಹಾಗೂ ಅದೇ ಚಿತ್ರದಲ್ಲಿ ವಸ್ತ್ರವಿನ್ಯಾಸ ಮಾಡಿರುವ ಇರ್ಷತ್ ನಿಸಾರ್ ಅವರಿಗೆ 10ಸಾವಿರ ರೂಪಾಯಿ ನಗದು ಬಹುಮಾನ ನೀಡಲು ಸರ್ಕಾರ ಮುಂದಾಗಿದೆ.
ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿರುವ ‘ಬೇರು’ ಚಿತ್ರದ ನಿರ್ಮಾಪಕ ಮಿತ್ರ ಅವರಿಗೆ 2.5ಲಕ್ಷ ರೂಪಾಯಿ, ಹಾಗೂ ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ 20ಸಾವಿರ ರೂಪಾಯಿ ಬಹುಮಾನ ನೀಡಿ ಸತ್ಕರಿಸುವುದಾಗಿ ಬಿ.ಶಿವರಾಂ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications