ಕನ್ನಡದ ಕಂದ ಸುದೀಪ್ ಮಾಡಿದ್ದು ಸರಿಯೇ?
ಮೈಸೂರು : ಕನ್ನಡಕ್ಕೆ ಕೈ ಎತ್ತಿದವನ ಮೇಲೆ ಕೈಮಾಡಿದ ನಟ ಸುದೀಪ್, ಅಭಿಮಾನಿಗಳ ಗೂಸಾ ತಪ್ಪಿಸಿಕೊಳ್ಳಲು ಕಾರಲ್ಲಿ ಪರಾರಿಯಾದರು ಎಂಬ ಸುದ್ದಿ ಮೈಸೂರಿನಿಂದ ಬಂದಿದೆ.
ನಗರದ ಹೊರವಲಯದ ಚಿಕ್ಕಹಳ್ಳಿ, ನಾಗನಹಳ್ಳಿ ವ್ಯಾಪ್ತಿಯ ಆಲದ ಮರದ ಬಳಿ ಮೈ ಆಟೋಗ್ರಾಫ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಭಿಮಾನಿಗಳ ಜೊತೆ ಸುದೀಪ್ ಅಸಭ್ಯವಾಗಿ ವರ್ತಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆಗಿದ್ದು ಇಷ್ಟು : ಮೈ ಆಟೋಗ್ರಾಫ್ ಚಿತ್ರದ ಚಿತ್ರೀಕರಣ ವೀಕ್ಷಿಸುತ್ತಿದ್ದ ಅಭಿಮಾನಿಯಾಬ್ಬ, ಚಿತ್ರದ ತಂತ್ರಜ್ಞನ ಜೊತೆ ಮಾತು ಬೆಳೆಸಿದ್ದಾನೆ. ತಂತ್ರಜ್ಞ ತಮಿಳಲ್ಲಿ ಉತ್ತರಿಸಿದಾಗ, ಕನ್ನಡದಲ್ಲಿ ಮಾತಾಡಿ ಎಂದಿದ್ದಾನೆ. ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ ತಂತ್ರಜ್ಞನ ಮೇಲೆ ಸುದೀಪ್ ಬಳಿ ದೂರು ಹೇಳಿದಾಗ, ಸುದೀಪ್ ಉಡಾಫೆ ಪ್ರದರ್ಶಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡ ಆ ಅಭಿಮಾನಿಯ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
ರೊಚ್ಚಿನಿಂದ ತನ್ನ ಗ್ರಾಮಕ್ಕೆ ತೆರಳಿದ ಅಭಿಮಾನಿ ಸುಮಾರು 40ಜನರನ್ನು ಚಿತ್ರೀಕರಣ ಸ್ಥಳಕ್ಕೆ ಕರೆತಂದಿದ್ದಾನೆ. ವಿಷಯ ಅರಿತು ಸುದೀಪ್ ಪರಾರಿಯಾಗಿದ್ದಾನೆ. ಗುಂಪಿನ ಹಲ್ಲೆಗೆ ಸಿಲುಕಿದ ಚಿತ್ರತಂಡ ಜಾಗ ಖಾಲಿ ಮಾಡಿದೆ. ಘಟನೆಯಲ್ಲಿ ಚಿತ್ರದ ನಾಯಕಿ ಮೀನಾ ಕಾರಿನ ಚಾಲಕನಿಗೂ ಪೆಟ್ಟಾಗಿದೆ ಎನ್ನಲಾಗಿದೆ.
ನಟ, ನಿರ್ದೇಶಕ, ನಿರ್ಮಾಪಕರಾಗಿ ‘ಮೈ ಆಟೋಗ್ರಾಫ್’ ಚಿತ್ರವನ್ನು ಸುದೀಪ್ ನಿರ್ಮಾಣ ಮಾಡುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications