ಈ ಚಿತ್ರ ಶುದ್ಧ ಸೋಂಬೇರಿಗಳ ಚಚ್ಚಿಬಡಿಯುಲಿದೆ : ಗುರು
ನವರಸಗಳನ್ನು ಗಟಗಟಗಟ ಕುಡಿಯುವ ನಾಯಕ ಜಗ್ಗೇಶ್ ಅವರ 25ವರ್ಷಗಳ ವೃತ್ತಿ ಜೀವನದ ದ್ಯೋತಕ "ಎದ್ದೇಳು ಮಂಜುನಾಥ" ಕಾಮಿಡಿ ಚಿತ್ರಕ್ಕೆ ಗುರುವಾರ(ನ.15) ಬೆಳಗ್ಗೆ ಚಾಲನೆ ಸಿಕ್ಕಿದೆ. ಬೆಂಗಳೂರು ಅರಮನೆಯಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಕಲಾವಿದರು, ತಂತ್ರಜ್ಞರು,ನಿರ್ದೇಶಕರು, ಸಾಹಿತಿಗಳು ಸಾಕ್ಷಿಯಾದರು.
ಸಾಹಿತಿ , ಪತ್ರಕರ್ತ ಬಿ.ವಿ. ವೈಕುಂಠರಾಜು ಮೊದಲ ದೃಶ್ಯಕ್ಕೆ ಕ್ಯಾಮೆರಾ ಕ್ಲಾಪ್ ಮಾಡಿದರೆ, ವಣಿಕ ಕೆ.ಎಂ. ಶ್ರೀನಿವಾಸಮೂರ್ತಿ ಆರಂಭ ಫಲಕ ತೋರಿದರು. ಮುಹೂರ್ತ ಸಮಾರಂಭದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿರ್ದೇಶಕ ಗುರುಪ್ರಸಾದ್, ಚಿತ್ರದ ಕಥಾಹಂದರ ಮತ್ತು ಸಾಮಾಜಿಕ ವಿಡಂಬನೆಯನ್ನು ಸಿನಿಮಾ ಮೂಲಕ ಎತ್ತಿಹಿಡಿಯುವ ತಮ್ಮ ತಂಡದ ಪ್ರಯತ್ನಗಳ ಬಗೆಗೆ ವಿವರಿಸಿದರು.
ಸೋಮಾರಿತನವನ್ನು ಚಚ್ಚಿಬಡಿಯುವ ಚಿತ್ರವಿದು. ಶುದ್ಧ ಸೋಂಬೇರಿಗಳನ್ನು ಎದ್ದೇಳಪ್ಪಾ ಎಂದು ಚುಚ್ಚಿ ಎಬ್ಬಿಸುವಾಗ ನಗೆತರಂಗಗಳೂ ಏಳುವ ಈ ಹಾಸ್ಯಪ್ರಧಾನ ಚಿತ್ರದಲ್ಲಿ ನಾಲಕ್ಕು ಹಾಡುಗಳಿವೆ. ರಾಜೇಶ್ ರಾಮನಾಥ್, ಬಿ.ಕೆ. ಸುಮಿತ್ರ ಮತ್ತು ಪಲ್ಲವಿಯವರ ಹಿನ್ನೆಲೆ ಗಾಯನದ ಹಾಡುಗಳನ್ನು ನಿರ್ದೇಶಕ ಗುರು ಅವರೇ ಬರೆದಿದ್ದಾರೆ ಎಂದು ನಿರ್ಮಾಪಕರಲ್ಲೊಬ್ಬರಾದ ಸನತ್ ಕುಮಾರ್ ವಿವರಿಸಿದರು. ಒಂದೇ ಹಂತದಲ್ಲಿ ಚಿತ್ರೀಕರಣ ಪೂರೈಸುವ ಉದ್ದೇಶ ಚಿತ್ರ ತಂಡಕ್ಕಿದೆ.
ನಾಯಕಿ ಪಾತ್ರದಲ್ಲಿ ಮಂಗಳೂರಿನ ಬೆಡಗಿ ಯಜ್ಞ ಶೆಟ್ಟಿ ಇದ್ದಾರೆ. ಅನೂಪ್ ಸೀಳಿನ್(ಸಂಗೀತ), ನವೀನ್ ಆಚಾರ್ಯ(ಕಲೆ), ಅಶೋಕ್ ವಿ ರಾಮನ್( ಛಾಯಾಗ್ರಹಣ) ಚಿತ್ರದ ವಿವಿಧ ಜವಾಬ್ದಾರಿ ಹೊತ್ತಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications