ಚಿತ್ರೀಕರಣ ವೇಳೆ ಮಂಡ್ಯದಲ್ಲಿ ನಟ ಸುದೀಪ್ ಗೆ ಗಾಯ
'ಕೆಂಪೇಗೌಡ' ಚಿತ್ರೀಕರಣದ ವೇಳೆ ನಟ ಸುದೀಪ್ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೈಲೂರಿನಲ್ಲಿ ಗುರುವಾರ ಮಧ್ಯಾಹ್ನ (ಡಿ.16) ನಡೆದಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬಾಂಬ್ ಸ್ಪೋಟಿಸುವ ವೇಳೆ ಈ ಅವಘಡ ಸಂಭವಿಸಿದೆ.
ಚಿತ್ರೀಕರಣಕ್ಕಾಗಿ ಸ್ಫೋಟಿಸಿದ ಬಾಂಬ್ನಿಂದ ಸುದೀಪ್ ನಾಲ್ಕು ಅಡಿ ದೂರದಲ್ಲಿದ್ದರು. ಸ್ಫೋಟದ ರಭಸಕ್ಕೆ ಸುದೀಪ್ ಅವರ ಬಲ ಮೊಣಕಾಲಿನ ಚಿಪ್ಪು ಹಾಗೂ ಬೆನ್ನಿಗೆ ಸುಟ್ಟ ಗಾಯಗಳಾಗಿವೆ. ಸುದೀಪ್ ಅಭಿಮಾನಿಗಳು ಗಾಬರಿ ಬೀಳುವಂತಹದ್ದೇನು ಅವರಿಗೆ ಆಗಿಲ್ಲ ಎಂದು ಚಿತ್ರದ ನಿರ್ಮಾಪಕ ಶಂಕರೇಗೌಡ ತಿಳಿಸಿದ್ದಾರೆ.
ಸದ್ಯಕ್ಕೆ ಸುದೀಪ್ ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸುದೀಪ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಶಂಕರೇಗೌಡ ತಿಳಿಸಿದ್ದಾರೆ. ಚಿತ್ರೀಕರಣ ನಿಲ್ಲಿಸಿದರೆ ತುಂಬಾ ಲಾಸಾಗುತ್ತದೆ ಎಂಬ ಕಾರಣಕ್ಕೆ ಈ ಸನ್ನಿವೇಶವನ್ನು ಮುಗಿಸಿಕೊಡುತ್ತೇನೆ ಎಂದು ಸುದೀಪ್ ಹೇಳಿದ್ದಾಗಿ ನಿರ್ಮಾಪಕರು ಹೇಳಿದ್ದಾರೆ.
ಗೃಹ ಸಚಿವರ ಮಗಳನ್ನು ಅಪಹರಣ ಮಾಡುವ ಸನ್ನಿವೇಶ ಇದಾಗಿತ್ತು. ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿತ್ತು ಆದರೂ ಚಿತ್ರೀಕರಣದಲ್ಲಿ ಈ ಅವಘಡ ಸಂಭವಿಸಿದೆ ಎಂದಿದ್ದಾರೆ ಶಂಕರೇಗೌಡ. ಮಡಿಕೆಯೊಂದರಲ್ಲಿ ಇಟ್ಟು ಬಾಂಬ್ ಸ್ಫೋಟಿಸುವ ಸನ್ನಿವೇಶ ಇದಾಗಿತ್ತು.
ಈ ಚಿತ್ರದಲ್ಲಿ ಸುದೀಪ್ ಅಭಿನಯಿಸುವುದರ ಜೊತೆಗೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಚಿತ್ರದ ತಾರಾಗಣದಲ್ಲಿ ಅಂಚಲ್ ಸಬರವಾಲ್, ರವಿಶಂಕರ್ ಪಿ ಹಾಗೂ ಉದ್ಯಮಿ ಅಶೋಕ್ ಖೇಣಿ ಅಭಿನಯಿಸಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ಸಿಂಗಂ' ರೀಮೇಕ್ 'ಕೆಂಪೇಗೌಡ'.


Click it and Unblock the Notifications











