ಉಪೇಂದ್ರ ಈಗ ಸಿಟ್ಟೇಂದ್ರ!
ಮಚ್ಚಿನ ವೀರ ದರ್ಶನ್ ಮತ್ತು ಸುದೀಪ್ ಬಳಿಕ ಈಗ ನಟ ಉಪೇಂದ್ರ ಪತ್ರಕರ್ತರ ಮೇಲೆ ಮುನಿಸಿಕೊಂಡಿದ್ದಾರೆ. ಯಾಕೆ ಹೀಗೆಲ್ಲ ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
‘ಜೋಗಿ’ ಚಿತ್ರದ ನಿರ್ದೇಶಕ ಪ್ರೇಮ್ ಬಗ್ಗೆ ಉಪೇಂದ್ರ ಅವರಿಗೆ ಅಸೂಯೆ ಇದೆ ಎಂಬ ವರದಿಗಳ ಬಗ್ಗೆ ಬೇಸರಗೊಂಡಿದ್ದಾರೆ.
‘ನಾನು ಶಿವಣ್ಣ ಒಳ್ಳೆಯ ಗೆಳೆಯರು, ಜೋಗಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎನ್ನುವ ಉಪೇಂದ್ರ, ಉಪೇಂದ್ರ ಏನು ಅನ್ನೋದನ್ನು ಯಾಕೆ ಬರೆಯುತ್ತಿಲ್ಲ. ನನ್ನ ಹೊಸ ಪ್ರಯತ್ನಗಳನ್ನು, ನನ್ನ ಪರಿಶ್ರಮವನ್ನು ಯಾಕೆ ಗುರ್ತಿಸಿ ಜನರಿಗೆ ತಿಳಿಸುತ್ತಿಲ್ಲ ಎಂದು ಪತ್ರಕರ್ತರನ್ನು ಆಟೋಶಂಕರ್ ಪಾರ್ಟಿಯಲ್ಲಿ ತರಾಟೆಗೆ ತೆಗೆದುಕೊಂಡರು.
‘ಎಚ್2ಓ’ ಚಿತ್ರದ ಕಹಿ ಅನುಭವ ನನ್ನನ್ನು ನಿರ್ದೇಶನದಿಂದ ದೂರ ಮಾಡಿತ್ತು. ಕೇವಲ ಒಂದೂವರೆ ತಿಂಗಳ ವೇತನಕ್ಕೆ ಒಂದೂವರೆ ವರ್ಷ ದುಡಿದಿದ್ದೇನೆ. ಆದರೂ ನನ್ನ ಮೇಲೆ ಗೂಬೆ ಕೂರಿಸಲಾಯಿತು ಎನ್ನುವುದು ಉಪೇಂದ್ರ ಅವರ ಸಿಟ್ಟು.
ಕಲ್ಕಿ ಅವತಾರ : ಸೆ.18 ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿಯೇ ಹೊಸ ಚಿತ್ರ ‘ಕಲ್ಕಿ’ ಸೆಟ್ಟೇರುತ್ತಿದೆ. ‘ರಕ್ತ ಕಣ್ಣೀರು’ ತಂಡವೇ ಈ ಚಿತ್ರದಲ್ಲೂ ಇದೆ. ಮುಣಿರತ್ನ ನಿರ್ಮಾಣದ ಈ ಚಿತ್ರವನ್ನು ತೆಲುಗಿನ ಪೋಸಾನಿ ಕೃಷ್ಣ ನಿರ್ದೇಶಿಸುವರು.
ಚಿಂದಿ ಆಯುವವ ಇನ್ಸ್ಪೆಕ್ಟರ್ ಆಗಿ, ಕೊನೆಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಹತ್ತುವ ಕಥೆಯನ್ನು ಚಿತ್ರ ಹೊಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಲಿದ್ದು, ಉಪ್ಪಿ ಅಭಿಮಾನಿಗಳಿಗೆ ಮುಕ್ತವಾಗಿ ಸ್ವಾಗತ ಕೋರಲಾಗಿದೆ.
ಸೆ.18ರಂದೇ ನಟ ವಿಷ್ಣುವರ್ಧನ್ ಮತ್ತು ಶ್ರುತಿ ಅವರ ಹುಟ್ಟುಹಬ್ಬವೂ ಉಂಟು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications