ನಲ್ಲ ಚಿತ್ರದ ನಾಯಕಿಗೆ ಕಲ್ಯಾಣ ಯೋಗ

ಕ್ರಿಶ್ ಹಾಗೂ ಸಂಗೀತಾ ನಡುವಿನ ಪ್ರೇಮಕ್ಕೆ ಇಬ್ಬರ ಮನೆಯವರು ವಿರೋಧಿಸಿದ್ದರು. ಆದರೆ ನಂತರ ಸರಳ ವಿವಾಹಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮೊದಲು ಪ್ರೇಮಿಗಳ ದಿನದಂದು ಮದುವೆ ಎಂದು ಹೇಳಲಾಗಿತ್ತಾದರೂ ನಂತರ ಮಹೂರ್ತ ಬದಲಾಗಿದ್ದು, ಫೆ. 1 ರಂದು ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಇಬ್ಬರು ಹಾರ ಬದಲಿಸಲಿದ್ದಾರೆ. ನಂತರ ಚೆನ್ನೈ ನಲ್ಲಿ ಭರ್ಜರಿ ಆರತಕ್ಷತೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
90 ರ ದಶಕದಲ್ಲಿ ತೆಲುಗು ಚಿತ್ರರಂಗದಲ್ಲಿ ಕಾಲಿರಿಸಿದ ಸಂಗೀತಾ, ಕಾಮಿಡಿಯನ್ ಆಲಿ ನಾಯಕತ್ವದ ಸಣ್ಣ ಬಜೆಟ್ ನ ಚಿತ್ರಗಳಲ್ಲಿ ನಟಿಸಿದ ನಂತರ ಕನ್ನಡದಲ್ಲಿ ವಜ್ರ ಚಿತ್ರದಲ್ಲಿ ರಾಮ್ ಕುಮಾರ್ ಜತೆ ಹಾಗೂ ಬೆಂಗಳೂರ್ ಬಂದ್ ಚಿತ್ರದಲ್ಲಿ ನಟಿಸಿದ್ದರು ಆಗ ಅವರ ಹೆಸರು ರಸಿಕಾ ಎಂದಾಗಿತ್ತು. ನಂತರ ತೆಲುಗಿನ ಖಡ್ಗಂ ಚಿತ್ರದ ನಟನೆಯಿಂದಮನೆ ಮಾತಾದ ಮೇಲೆ ಹಿಂದುರಿಗಿ ನೋಡಲಿಲ್ಲ. ತಮಿಳಿನ ವಿಕ್ರಮ್, ಸೂರ್ಯ, ತೆಲುಗಿನ ರವಿತೇಜಾ ಜೊತೆ ನಟಿಸಿದ್ದಾರೆ.
ತಮಿಳಿನ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಪಿತಾಮಗನ್ (ಕನ್ನಡದಲ್ಲಿ ಅನಾಥರು) ಹಾಗೂ ಕನ್ನಡಲ್ಲಿ ಸುದೀಪ್ ಜತೆಯಲ್ಲಿ ನಲ್ಲ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಮಾಧವನ್ ಜತೆ ಒರುವನ್ ಚಿತ್ರದಲ್ಲಿ ಸದ್ಯ ನಟಿಸುತ್ತಿದ್ದಾರೆ. ಉದಯೋನ್ಮುಖ ಗಾಯಕ ಕ್ರಿಶ್ ಅವರು ಉನ್ನಾಲೆ ಉನ್ನಾಲೆ(ಕನ್ನಡದ ವಿನಯ್ ರೈ ನಾಯಕ) ಚಿತ್ರದ ಮೂಲಕ ಜನಪ್ರಿಯರಾದವರು. ಹ್ಯಾರೀಸ್ ಜಯರಾಜ್ ಅವರ ವಾರ್ರ್ನಂ ಆಯಿರಂ, ಭೀಮಾ ಮುಂತಾದ ಚಿತ್ರಗಳಲ್ಲಿ ಅದ್ಭುತ ಗಾಯನದಿಂದ ಎಲ್ಲರಮನಸೂರೆ ಮಾಡಿದ ಯುವ ಗಾಯಕ ಸಂಗೀತಾ ಬಾಳಿಗೆ ನಾಯಕನಾಗಿದ್ದಾರೆ. ಮದುವೆ ಸಮಯಕ್ಕೆ ಸರಿಯಾಗಿ ಚಿತ್ರವೊಂದರಲ್ಲಿ ನಾಯಕನಾಗುವ ಅವಕಾಶವು ಲಭ್ಯವಾಗಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications