ಬಾಕ್ಸಾಫೀಸಲ್ಲಿ ಉಪ್ಪಿಯ ಮತ್ತೊಂದು 'ರಕ್ತ ಕಣ್ಣೀರು'!
5 ಜನ ನಾಯಕಿರುಗಳ ಜೊತೆಗಿನ ಉಪ್ಪಿಯ 'ಬುದ್ದಿವಂತ' ಈಗಾಗಲೇ ಅಂದರೆ 3ನೆ ವಾರದ ಹೊತ್ತಿಗೆ ಬರೋಬ್ಬರಿ 5 ಕೋಟಿ ದಾಟಿದೆ ಎಂದು ಚಿತ್ರದ ನಿರ್ಮಾಪಕ ಎ ಮೋಹನ್ ಅವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ. ಇನ್ನೊಂದು ವಾರದಲ್ಲಿ ಚಿತ್ರದ ಗಳಿಕೆ ರು.7.5 ಕೋಟಿ ದಾಟುತ್ತದೆ ಎಂದು ಅವರು ತಿಳಿಸಿದರು. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ನಿರ್ದೇಶಕ ರಾಮನಾಥ್ ಋಗ್ವೇದಿಯವರಿಗೆ ಚಿತ್ರರಂಗದಲ್ಲಿ ಉತ್ತಮ ಬ್ರೇಕ್ ಸಿಕ್ಕ ಹಾಗೆ ಆಗಿದೆ.
ತೆಲುಗು ಭಾಷಿಗರು ಜಾಸ್ತಿ ಇರುವ ಕೋಲಾರ, ಬಳ್ಳಾರಿ ವಿಭಾಗಲ್ಲಂತೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಉತ್ತಮ ಸಂಗೀತ, ಅಚ್ಚುಕಟ್ಟಾದ ನಿರೂಪಣೆ, ಸಂಭಾಷಣೆ ಹಾಗು ಉಪ್ಪಿಯವರ ಡೈಲಾಗ್ ಡೆಲಿವರಿ ಹೆಚ್ಚಾಗಿ ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಮೈಸೂರ್ ಮತ್ತು ಬೆಂಗಳೂರು ವಲಯದಲ್ಲೂ ಚಿತ್ರ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರದ ಯಶಸ್ಸಿನಿಂದ ನನಗೆ ಹಾಗು ಚಿತ್ರಕ್ಕೆ ದುಡಿದ ಎಲ್ಲರಿಗು ಹೊಸ ಹುರುಪು ಬಂದಂತಾಗಿದೆ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಹಿಂದಿ ಚಿತ್ರರಂಗಕ್ಕೆ ಹೋಗುವ ಮೊದಲು 7 ಕನ್ನಡ ಚಿತ್ರಗಳಲ್ಲಿ ನಟಿಸಿದ ಸುಮನ್ ರಂಗನಾಥ್ ಮಾತಾಡಿ, ಚಿತ್ರದ ಯಶಸ್ಸು ಹಾಗೂ ನನಗೆ ನನ್ನ ಮಾತೃ ಭಾಷೆಯಲ್ಲೇ ಮತ್ತೆ ಅವಕಾಶ ಸಿಕ್ಕಿದಂತಾಗಿದ್ದು ಬಹಳ ಸಂತೋಷ ಎಂದು ತಿಳಿಸಿದರು. ಚಿತ್ರಾನ್ನ ನನ್ನ ಬಹಳ ಇಷ್ಟವಾದಂತ ತಿಂಡಿ ಎಂದು ಚಿತ್ರಾನ್ನ, ಚಿತ್ರಾನ್ನ ಹಾಡನ್ನು ಸ್ಮರಿಸಿಕೊಂಡರು.
ಚಿತ್ರದ ಯಶಸ್ಸು ನನ್ನನ್ನು ಇನ್ನು ಒಳ್ಳೆ ಚಿತ್ರದಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡಿದೆ ಎಂದು ಉಪೇಂದ್ರ ತಿಳಿಸಿದರು.ಏನೇ ಆಗಲೀ ಎರಡೂ ಚಿತ್ರಗಳು ರಿಮೇಕ್ ಚಿತ್ರಗಳೆಂದು ಭಾರಿ ಚರ್ಚೆಗೆ ಒಳಗಾಗಿದ್ದರು "ಬುದ್ದಿವಂತ" ಮತ್ತು "ವಂಶಿ" ಒಂದಕ್ಕೊಂದು ಪೈಪೋಟಿ ನೀಡುತ್ತಾ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆಯೇ?
(ದಟ್ಸ್ ಕನ್ನಡ ಸಿನಿವಾರ್ತೆ)
ಪೂರಕ ಓದಿಗೆ
ನರ್ತಕಿ ಮುಂದೆ 'ಬುದ್ಧಿವಂತ'ನ 80 ಅಡಿ ಕಟೌಟ್
ಬುದ್ಧಿವಂತ 'ಉಪ್ಪಿ'ಗಿಂತ ರುಚಿ ಬೇರೆ ಇಲ್ಲ...
ಕನ್ನಡದ ಕರಣ್ ಜೋಹರ್, ಬರಿಸಿದ ಜ್ವರ !


Click it and Unblock the Notifications