'ಪರಮಶಿವ'ನಾಗಿ ಕ್ರೇಜಿ ಸ್ಟಾರ್; ಎಲ್ಲಾ ಸೆಂಟಿಮೆಂಟು ಶಿವ!
ಸೆಂಟಿಮೆಂಟಿನ ವಿಚಾರಕ್ಕೆ ಬಂದರೆ ಸಿನಿಮಾ ತಾರೆಗಳಿಗೆ ಒಂದು ಹಿಡಿ ಜಾಸ್ತಿ ಎಂದೇ ಹೇಳಬೇಕು. ಮಕಾರ, ಚಕಾರ ಪ್ರಿಯ ನಿರ್ದೇಶಕರಂತೂ ಪ್ರೇಕ್ಷಕರಿಗೆ ಜ್ವರ ಬರುವವರೆಗೂ ಚಿತ್ರಗಳನ್ನು ಹೆಣೆದ ಉದಾಹರಣೆಗಳೂ ಗಾಂಧಿನಗರದಲ್ಲಿ ಧಾರಾಳವಾಗಿ ಸಿಗುತ್ತವೆ. ಯಾಕೆ ಎಂದ್ರೆ ಸೆಂಟಿಮೆಂಟಿನ ಮಹಿಮೆ ಎನ್ನುತ್ತಾರೆ. ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ವಿಚಾರಕ್ಕೆ ಬಂದರೆ, ಅವರಿಗೆ ಈಶ್ವರನೆಂದರೆ ಅಪಾರ ನಂಬಿಕೆ ಜೊತೆಗೆ ಸೆಂಟಿಮೆಂಟು!
ಹಾಗಾಗಿಯೇ ತಮ್ಮ ಚಿತ್ರಗಳ ಹಾಡಿನಲ್ಲೋ, ಯಾವುದಾದರೊಂದು ದೃಶ್ಯದಲ್ಲೋ ಶಿವನನ್ನು ತೋರಿಸದಿದ್ದರೆ ಅವರಿಗೆ ಸಮಾಧಾನವಾಗುವುದಿಲ್ಲ. ಈಗ ಇನ್ನೂ ಒಂದು ಅಡಿ ಮುಂದಿಟ್ಟಿರುವ ರವಿಚಂದ್ರನ್, ಶಿವನ ಹೆಸರಿನಲ್ಲಿ ಚಿತ್ರವೊಂದನ್ನು ತೆಗೆಯಲು ಮುಂದಾಗಿದ್ದಾರೆ. ಈ ಚಿತ್ರವನ್ನು ಅಣಜಿ ನಾಗರಾಜ್ ನಿರ್ಮಿಸುತ್ತಿದ್ದು ಚಿತ್ರಕ್ಕೆ 'ಪರಮಶಿವ'ಎಂದು ಹೆಸರಿಡಲಾಗಿದೆ.
ಚಿತ್ರದ ಶೀರ್ಷಿಕೆ ಕೇಳಿದರೆ ಇದೊಂದು ಅಪ್ಪಟ ಭಕ್ತಿ ಪ್ರಧಾನ ಚಿತ್ರ ಅನ್ನಿಸುವುದು ಸಹಜ. ಆದರೆ ಇದು ಪಕ್ಕಾ ಮಸಾಲಾ ಚಿತ್ರ ಎನ್ನುತ್ತಾರೆ ರವಿ. ಹೆಸರಷ್ಟೇ 'ಪರಮಶಿವ', ಉಳಿದಂತೆ ರವಿ ಚಿತ್ರಗಳಲ್ಲಿರುವ ಎಲ್ಲಾ ಮಸಾಲೆ ಅಂಶಗಳು ಇರುತ್ತವೆ. ಶೀಘ್ರದಲ್ಲೇ 'ಪರಮಶಿವ' ಸೆಟ್ಟೇರಲಿದೆ.
ಪರಮಶಿವನ ಮಹಾನ್ ಭಕ್ತ ನಾನು ಎನ್ನುವ ರವಿ, ನನ್ನಂತಹ ಭಕ್ತನಲ್ಲದೆ ಇನ್ಯಾರು 'ಪರಮಶಿವ' ಎಂದು ಚಿತ್ರಕ್ಕೆ ಹೆಸರಿಡಲು ಸಾಧ್ಯ ಎನ್ನುತ್ತಾರೆ. ಅಂದಹಾಗೆ ರವಿ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಜಪ್ಪಯ್ಯ ಅಂದರು ಎದ್ದು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. 'ನಾರಿಯ ಸೀರೆ ಕದ್ದ' ಚಿತ್ರಕ್ಕೂ ಪ್ರೇಕ್ಷಕರಿಂದನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈಗ ' ಪರಮಶಿವ'ನ ಬಗ್ಗೆ ರವಿ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. [ರವಿಚಂದ್ರನ್]


Click it and Unblock the Notifications











