ಕನ್ನಡ ಚಿತ್ರಗಳಿಗೆ ಬಜೆಟ್ನಲ್ಲಿ ಅನುದಾನ
ಬೆಂಗಳೂರು, ಜು. 17 : ಡಬ್ಬಿಂಗ್ ಚಿತ್ರ ಹೊರತುಪಡಿಸಿ ಕನ್ನಡದ ಎಲ್ಲ ಚಿತ್ರಗಳಿಗೆ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಅನೇಕ ದಿನಗಳ ಚಿತ್ರರಂಗದ ಬೇಡಿಕೆಗಳಿಗೆ ಬಿಜೆಪಿ ಸರ್ಕಾರ ಸ್ಪಂದಿಸಿದ್ದು, ಕನ್ನಡ ಚಿತ್ರಗಳಿಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆ ಜಯಮಾಲಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಕನ್ನಡದ ಎಲ್ಲ ಚಿತ್ರಗಳಿಗೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಹಾಗೆಯೇ ಕನ್ನಡ ಚಲನಚಿತ್ರ ಅಕಾಡಮಿ ಸ್ಥಾಪನೆ ಮತ್ತು ಸ್ವರ್ಣ ಕಮಲ ಪ್ರಶಸ್ತಿ ಪಡೆದ ಚಿತ್ರಕ್ಕೆ ಈಗಿರುವ ರು.15 ಲಕ್ಷ ಅನುದಾನ ಹಣವನ್ನು 25 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿದೆ.
ಯಡಿಯೂರಪ್ಪ ಬಜೆಟ್ ನಲ್ಲಿ ಚಿತ್ರರಂಗಕ್ಕೆ ವಿಶೇಷ ಆದ್ಯತೆ ನೀಡಿದ್ದು ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ, ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಚಿತ್ರಗಳ ಅನುದಾನ ಬೇಡಿಕೆ ಯಡಿಯೂರಪ್ಪ ಈಡೇರಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಚಿತ್ರ ನಿರ್ಮಾಪಕರಿಗೆ ಅನುದಾನ ಉತ್ತೇಜನ ನೀಡಲಿದೆ ಎಂದು ಚಿತ್ರೋದ್ಯಮದ ಅಭಿಪ್ರಾಯವಾಗಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)
ಯಡಿಯೂರಪ್ಪ ಚೊಚ್ಚಲ ಬಜೆಟ್ನ ಪಕ್ಷಿನೋಟ
ಚಿತ್ರರಂಗದ ಮೂರು ಪ್ರಮುಖ ಬೇಡಿಕೆಗಳಿಗೆ ಸಿಎಂ ಅಸ್ತು
ಶ್ರೀಸಾಮಾನ್ಯರ ಬಜೆಟ್ ಮಂಡಿಸಿದ ಯಡಿಯೂರಪ್ಪ


Click it and Unblock the Notifications