ವಿಭಿನ್ನ ಪ್ರಚಾರದತ್ತ ಜಿಂದಗಿ; ನಿಷೇಧಾಜ್ಞೆಗೆ ಕ್ಲೈಮ್ಯಾಕ್ಸ್
ಸಪ್ತಗಿರಿ ಗ್ರೂಪ್ ಲಾಂಛನದಲ್ಲಿ ಎ.ಟಿ.ಲೋಕೇಶ್ ನಿರ್ಮಿಸಿರುವ, 'ಪ್ರೀತಿ ಜೀವನದ ಹಾದಿಯನ್ನು ಬದಲಿಸುತ್ತದೆ. ಈ ಜಿಂದಗಿ ಅಂದುಕೊಂಡ ಹಾಗೆ ಸಾಗುವುದಿಲ್ಲ 'ಎಂದು ಸಾರುವ 'ಜಿಂದಗಿ' ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ವಾಹನಗಳಲ್ಲಿ ಪರದೆಯನ್ನು ಅಳವಡಿಸಿ ಅದರಲ್ಲಿ 'ಜಿಂದಗಿ'ಯ ಹಾಡು, ಸನ್ನಿವೇಶಗಳ ತುಣುಕುಗಳನ್ನು ಜನರಿಗೆ ತೋರಿಸುವ ಮೂಲಕ ಬಹಿರಂಗ ಪ್ರಚಾರಕ್ಕೆ ನಿರ್ಮಾಪಕರು ಹದಿನೈದು ದಿನಗಳ ಹಿಂದೆ ಚಾಲನೆ ನೀಡಿದ್ದರು.
ಮುಗಿಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿರುವ ಈ ಚಿತ್ರಕ್ಕೆ ಮೈಸೂರ್ ಮೋಹನ್ ಸಂಗೀತ ಸಂಯೋಜಿಸಿದ್ದಾರೆ. ಹಂಸಲೇಖ, ನಾಗೇಂದ್ರಪ್ರಸಾದ್, ಗೋಟೂರಿ ಗೀತರಚನೆ ಮಾಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಜೀವ್, ಪ್ರಿಯಾಂಕ, ಹೇಮಶ್ರೀ, ಅವಿನಾಶ್, ಮಂಡ್ಯರಮೇಶ್, ನಮಿತಾರಾವ್, ಸಿಲ್ಲಿಲಲ್ಲಿಯ ಮಿತ್ರ ಮುಂತಾದವರಿದ್ದಾರೆ.
ನಿಷೇದಾಜ್ಞೆಯಲ್ಲಿ ಗೃಹಮಂತ್ರಿ ಬಂಧನ
ಪ್ರಸ್ತುತ ರಾಜ್ಯದಲ್ಲಿ ಗೃಹಮಂತ್ರಿ ಇಲ್ಲದಿದ್ದರೂ ಭರತ್ಬಾಬು ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ನಿಷೇದಾಜ್ಞೆ'ಚಿತ್ರದಲ್ಲಿ ಭ್ರಷ್ಟ ಗೃಹಮಂತ್ರಿಯೊಬ್ಬರಿದ್ದಾರೆ.
ಖಾಸಗಿ ಅತಿಥಿ ಗೃಹದಲ್ಲಿ ಗೃಹಮಂತ್ರಿ ಸುರೇಶ್ಮಂಗಳೂರು ಹಾಗೂ ಕೆಲವು ಶಾಸಕರು ಕ್ಯಾಬರೆ ನೃತ್ಯ ವಿಕ್ಷಿಸುತ್ತಾ ನೃತ್ಯಗಾರ್ತಿಯ ಅಂದಕ್ಕೆ ಮಾರುಹೋಗಿದ್ದ ಸಮಯದಲ್ಲೇ ಆ ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ಅಧಿಕಾರಿ ನಾಯಕ ಆದಿಲೋಕೇಶ್ ಅಲ್ಲಿದ್ದವರನ್ನು ಬಂಧಿಸಲು ಮುಂದಾದಾಗ ದೊಡ್ದ ಮಾರಾಮಾರಿ ನಡೆದುಹೋಗುತ್ತದೆ. ಇದು ಚಿತ್ರದ ಕ್ಲೈಮ್ಯಾಕ್ಸ್ ಕೂಡ. ಈ ಸಾಹಸಮಯ ಸನ್ನಿವೇಶವನ್ನು ಮೂರು ದಿವಸಗಳ ಕಾಲ ಹೊಸಕೋಟೆಯ ಸುತ್ತಮುತ್ತ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಅವರ ಸಹಯೋಗದೊಂದಿಗೆ ಚಿತ್ರೀಕರಿಸಿಕೊಂಡರು ನಿರ್ದೇಶಕ ಪದ್ಮನಾಭ.
ಎಸ್.ವಿ.ನಾರಾಯಣಸ್ವಾಮಿ ಹೊಸಕೋಟೆ ಹಾಗೂ ಸೂರ್ಯಕಾಂತ್ ಜಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಸವರಾಜಪ್ಪ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಎಂ ಎಲ್ ಸಿ ಅಬ್ದುಲ್ ಅಜೀಮ್ ವಿಶೇಷಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಪದ್ಮನಾಭ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರಮೇಶ್ ಛಾಯಾಗ್ರಹಣ, ಗಿರಿಧರ್ ಸಂಗೀತ ಸಂಯೋಜನೆ, ಯತೀಶ್ಕುಮಾರ್ ಸಂಕಲನ, ಅರವಿಂದ್ ನೃತ್ಯ ನಿರ್ದೇಶನ, ಕೃಷ್ಣಾಚಾರ್ ಕಲಾ ನಿರ್ದೇಶನ, ಲಕ್ಷ್ಮೀಕುಮಾರ್, ಮೂರ್ತಿ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಆದಿಲೋಕೇಶ್, ಭರತ್ಬಾಬು, ಪದ್ಮಜಾರಾವ್, ಪ್ರಿಯಾಂಕ ಚಂದ್ರ, ಶಂಕರ್ ಅಶ್ವತ್, ನೀನಾಸಂ ಅಶ್ವತ್, ಸುರೇಶ್ ಮಂಗಳೂರು, ಸ್ನೇಹ ಜಗದೀಶ್ ಹಾಗೂ ಧಮ್ಕುಮಾರ್ ಇದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications