ರಾಮ್ ಗೋಪಾಲ್ ವರ್ಮ ಚಿತ್ರದಲ್ಲಿ ಸುದೀಪ್
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ಸುದೀಪ್ ಅವರು ಹಿಂದಿಚಿತ್ರರಂಗಕ್ಕೆ ಕಾಲಿಡುವುದು ನಿಶ್ಚಿತವಾಗಿದೆ. ಮಾ.19 ರಂದು ಮುಂಬಯಿಗೆ ಹಾರಲಿರುವ ಸುದೀಪ್ , ಗೂಳಿ ಚಿತ್ರದ ಬಿಡುಗಡೆಗೆ ಇಲ್ಲಿ ಉಳಿಯುವುದು ಅನುಮಾನವಾಗಿದೆ.
ದಟ್ಸ್ ಸಿನಿತಂಡ
ಕೋಟಿ ನಿರ್ಮಾಪಕ ರಾಮು ಬ್ಯಾನರ್ ನ ಬಹು ನಿರೀಕ್ಷಿತ ಚಿತ್ರ 'ಗೂಳಿ' ಕಳೆದ ವಾರ ಬಿಡುಗಡೆಯಾಗಬೇಕಿತ್ತು. ಮಲೆಯಾಳಿ ಬೆಡಗಿ ಮಮತಾ ಮೋಹನ್ ದಾಸ್ ಜತೆ ನಟಿಸಿರುವ ಸುದೀಪ್ ಮತ್ತೆ ಲಾಂಗ್ ಮಚ್ಚು ಹಿಡಿದು ಹೊಸ ಗೆಟೆಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮು ಹಾಗೂ ಸುದೀಪ್ ಮಧ್ಯೆ ಏನು ನಡೆಯಿತೋ ಗೊತ್ತಿಲ್ಲ ಚಿತ್ರಮುಂದೂಡಲ್ಪಟ್ಟು ಮಾ21ಕ್ಕೆ ಎಂದು ನಿಗದಿಯಾಯಿತು ಎಂದು ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿನ ಮಾತು.
ಮುಂಬಯಿಗೆ ಹಾರಲಿರುವ ಸುದೀಪ್ ರಾಮ್ ಗೋಪಾಲ್ ವರ್ಮಾ ಬ್ಯಾನರ್ ನಲ್ಲಿ ನಟಿಸಲಿದ್ದಾರೆ. ಇನ್ನೂ ಅಲ್ಲಿಗೆ ಕಾಲಿಡೋದ್ದಕ್ಕೆ ಮುಂಚೆನೇ ಅವರ ವೃತ್ತಿಪರತೆ ಬಗ್ಗೆ ಸುದೀಪ್ ಹೊಗಳೋಕೆ ಶುರು ಮಾಡಿದ್ದಾರೆ. ತಮ್ಮ ಚಿತ್ರದ ಪೂರ್ಣ ಷೆಡ್ಯೂಲ್ ಹಾಗೂ ಸ್ಕ್ರೀಪ್ ಮುಂಚಿತವಾಗಿ ಸಿಕ್ಕಿದ್ದು ಎಲ್ಲಾ ಅಚ್ಚುಕಟ್ಟಾಗಿ ಸಾಗುತ್ತಿದೆ ಎನ್ನುತ್ತಾರೆ ಸುದೀಪ್.
ಕನ್ನಡದಲ್ಲಿ ಮುಸ್ಸಂಜೆಯ ಮಾತು, ತೀರ್ಥ ಹಾಗೂ ಚಿ.ಗುರುದತ್ ಅವರ ಬಹುನಿರೀಕ್ಷೆಯ ಕಾಮಣ್ಣನ ಮಕ್ಕಳು ಚಿತ್ರಗಳು ಇನ್ನೂ ಪ್ರಗತಿಯ ಹಂತದಲ್ಲಿದೆ. ಬಹುಶಃ ನಾನು ಹಿಂದಿ ಚಿತ್ರದ ಶೂಟಿಂಗ್ ಮುಗಿಸಿದ ಮೇಲೆ ತೀರ್ಥ ಹಾಗೂ ಉಳಿದ ಚಿತ್ರಗಳ ಬಾಕಿ ಕೆಲಸ ಮುಗಿಸುತ್ತೇನೆ ಎಂದರು ಕಿಚ್ಚ ಸುದೀಪ್.


Click it and Unblock the Notifications