ಏಡ್ಸ್ ಜಾಗೃತಿಗಾಗಿ ವಿಷ್ಣು ಮೈಸೂರಿನ ಬೀದಿಗಿಳಿಯಲಿರುವ ಒಂದು ದಿನವಷ್ಟೆ ಮುಂಚೆ ಅವರ ಲೇಟೆಸ್ಟ್ ಚಿತ್ರ ತೆರೆಗೆ ಬರಲಿದೆ. ಹೀಗಾಗಿ ಏಡ್ಸ್ ಜಾಗೃತಿ, ಅವರ ಸಿನಿಮಾ ಪ್ರಚಾರಕ್ಕೂ ವರದಾನವಾಗಲಿದೆ.
*ಪಂಕಜ, ಮೈಸೂರು
ಬಹು ದಿನಗಳ ಕಾಲ ಡಬ್ಬದಲ್ಲೇ ಕೂತಿದ್ದ ‘ರಾಜಾ ನರಸಿಂಹ’ ತೆರೆ ಕಾಣುವ ಮರು ದಿನವೇ ವಿಷ್ಣುವರ್ಧನ್ ಮೈಸೂರಿನಲ್ಲಿ ರ್ಯಾಲಿ ಹೊರಡಲಿದ್ದಾರೆ.
ಇದು ತಮ್ಮ ಚಿತ್ರದ ಪ್ರಚಾರ ಕಾರ್ಯವಲ್ಲ . ಏಡ್ಸ್ ಜಾಗೃತಿಯ ಅಜೆಂಡಾ ಹೊತ್ತು ಮಂತ್ರಿ ಮಹೋದಯರ ಜೊತೆ ವಿಷ್ಣು ಹೆಜ್ಜೆ ಹಾಕಲಿದ್ದಾರೆ. ವಿಷ್ಣುವರ್ಧನ್ರ ಈ ವರಸೆಯನ್ನು ಸ್ವಾಮಿ ಕಾರ್ಯ, ಸ್ವಕಾರ್ಯ- ಎರಡೂ ಆಗಿಸುವುದು ಅವರ ಅಭಿಮಾನಿಗಳ ಕನಸು. ಅದಕ್ಕೆ ವಿಷ್ಣು ತಮ್ಮ ಹಳೇ ಸ್ಟೈಲಿನಲ್ಲೇ ‘ನೋ’ ಅಂದರೂ ಕೂಡ, ರಾಜಾ ನರಸಿಂಹ ನಿರ್ದೇಶಕ ಮುತ್ಯಾಲ ಸುಬ್ಬಯ್ಯ ಚಿತ್ರಕ್ಕೆ ಪುಕ್ಕಟೆ ಪ್ರಚಾರ ಸಿಗುತ್ತದೆ ಎಂದು ಮುಸಿಮುಸಿ ನಗುತ್ತಿರುವುದು ದಿಟ.
ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಲಯನ್ಸ್ ಕ್ಲಬ್ ಮಾರ್ಚ್22ರಂದು ಮೈಸೂರಿನ ಬೀದಿಬೀದಿಗಳಲ್ಲಿ ಏಡ್ಸ್ ಜಾಗೃತಿ ರ್ಯಾಲಿಯನ್ನು ಆಯೋಜಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ವಿಶ್ವನಾಥ್ ಬೆಳಗ್ಗೆ 9.30 ಗಂಟೆಗೆ ಸರಿಯಾಗಿ ರ್ಯಾಲಿಗೆ ಚಾಲನೆ ಕೊಡುವರು. ತೋಟಗಾರಿಕಾ ಸಚಿವ ಎಂ.ಶಿವಣ್ಣ, ಸಂಸದರು ಹಾಗೂ ಶಾಸಕರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವರಾದರೂ, ವಿಷ್ಣು ಭರಾಟೆಯಲ್ಲಿ ಇವರೆಲ್ಲರ ನಡೆ ಮಂಕಾಗುವ ಸಾಧ್ಯತೆಯಿದೆ.
ಅಂದಹಾಗೆ, ಮೈಸೂರಿನ ಅಲ್ಲಲ್ಲಿ ಕಾಂಡಮ್ ವಿತರಿಸುವ ಆಟೋಮ್ಯಾಟಿಕ್ ಯಂತ್ರಗಳನ್ನು ಅಳವಸುವ ಕುರಿತು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಲಯನ್ಸ್ ಕ್ಲಬ್ ಗಂಭೀರವಾಗಿ ಯೋಚಿಸುತ್ತಿದೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications