ಕೊನೆಗೂ ನೆರವೇರಿದ ರಕ್ಷಿತಾ-ಪ್ರೇಮ್ ನಿಶ್ಚಿತಾರ್ಥ
ಪ್ರೇಮ ಪ್ರಕರಣಕ್ಕೆ ಮನ್ನಣೆ, ಮಾರ್ಚ್ 31ಕ್ಕೆ ಅಧಿಕೃತ ಘೋಷಣೆ. ಆದಿ ಮನದಲ್ಲಿ ಸುಂಟರಗಾಳಿ, ಪ್ರೇಮ್ ಮನದಲ್ಲಿ ತಂಗಾಳಿ
ಜಯನಗರದ ರಕ್ಷಿತಾ ನಿವಾಸದಲ್ಲಿ ನಡೆದ ನಿಶ್ಚಿತಾರ್ಥದಲ್ಲಿ , ಎರಡೂ ಕುಟುಂಬಗಳ ಕೆಲ ಆಪ್ತ ಮಿತ್ರರು ಮಾತ್ರ ನೆರೆದಿದ್ದರು. ಈ ವಿಷಯ ತಿಳಿದು ಮಾಧ್ಯಮದವರು ಸ್ಥಳಕ್ಕೆ ಧಾವಿಸಿದಾಗ, ಅವರಿಗೆ ಪ್ರವೇಶ ನಿರಾಕರಿಸಲಾಯಿತು.
ಇವರಿಬ್ಬರ ನಡುವೆ ಪ್ರೇಮ ಅಂಕುರಿಸಿದೆ. ಇಷ್ಟರಲ್ಲೇ ಮದುವೆಯಾಗುತ್ತಾರೆ ಎಂಬ ಗಾಸಿಪ್ ಕಳೆದ ಹಲವು ದಿನಗಳಿಂದ ಹರಡಿಕೊಂಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈ ಜೋಡಿ ಹಲವಾರು ಬಾರಿ ಜೊತೆಜೊತೆಯಲಿ ಕಾಣಿಸಿಕೊಂಡಿದ್ದರು. ಇದೀಗ ನಿಶ್ಚಿತಾರ್ಥ ನೆರವೇರಿದ್ದು, ಈ ಕುರಿತ ಗಾಳಿಮಾತುಗಳಿಗೆ ತೆರೆಬಿದ್ದಿದೆ.
ಮಾರ್ಚ್ 31 ರಕ್ಷಿತಾ ಜನ್ಮದಿನವಾಗಿದ್ದು, ಆ ದಿನವೇ ನಿಶ್ಚಿತಾರ್ಥದ ಕುರಿತು ಅಧಿಕೃತ ಘೋಷಣೆಯಾಗಲಿದೆ. ಮದುವೆ ನವೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ತಮ್ಮ ನಿರ್ದೇಶನದ ಪ್ರಥಮ ಚಿತ್ರ ‘ಕರಿಯ’ದ ಮೂಲಕ ಗಮನ ಸೆಳೆದ ಪ್ರೇಮ್, ಮುಂದೆ ‘ಎಕ್ಸ್ಕ್ಯೂಸ್ ಮಿ’, ‘ಜೋಗಿ’ ಮೂಲಕ ಜೈತ್ರಯಾತ್ರೆ ಮುಂದುವರಿಸಿದವರು. ಯುವ ಪೀಳಿಗೆ ನಿರ್ದೇಶಕರಲ್ಲೇ ಅತಿ ಹೆಚ್ಚು ತಾರಾ ಮೌಲ್ಯ ಸಂಪಾದಿಸಿರುವ ಅವರು, ಇದೀಗ ತಾವೇ ನಿರ್ದೇಶಿಸುತ್ತಿರುವ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಮೂಲಕ ಅಭಿಯನಕ್ಕೂ ಧುಮುಕಿದ್ದಾರೆ.
ರಕ್ಷಿತಾ ಕೂಡ ಮೊದಲ ಚಿತ್ರ ‘ಅಪ್ಪು’ ಮೂಲಕವೇ ಗಮನ ಸೆಳೆದ ನಟಿ. ಆನಂತರ ಒಂದರ ಮೇಲೊಂದು ಯಶಸ್ವೀ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅವರಿಗೆ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಬೇಡಿಕೆ ಇದೆ. ಪ್ರಸ್ತುತ ಗೌರಿ ಲಂಕೇಶ್ ನಿರ್ದೇಶನದ ‘ತನನಂ ತನನಂ’ ಹಾಗೂ ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ‘ಒಡಹುಟ್ಟಿದವಳು’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications