ಫಿಲಂ ಫೇರ್ ಗೌರವಕ್ಕೆ ಪಾತ್ರವಾದ ಕೋತಿಗಳು ಸಾರ್ ಕೋತಿಗಳು
ವಿವಿಧ ಸಂದರ್ಭಗಳಲ್ಲಿ ಸಂಘ ಸಂಸ್ಥೆಗಳು ನಾಯಕ ನಟರನ್ನು ಗೌರವಿಸುವುದು ರೂಢಿ. ತಮ್ಮ ಶಕ್ತ್ಯಾನುಸಾರ ಬೆಳ್ಳಿ, ಚಿನ್ನ, ವಜ್ರದ ಕಿರೀಟವನ್ನು ನಾಯಕನಿಗೆ ತೊಡಿಸಿ ಧನ್ಯೋಸ್ಮಿ ಎನ್ನುವ ಸಂಘಗಳು ಸಾಕಷ್ಟಿವೆ. ಆದರೆ, ನಾಯಕಿಯರಿಗೆ ಸನ್ಮಾನ ಮಾಡುವಂಥ ಸಂಘಗಳು?
ನಾಯಕಿಯರಿಗೆ ಸನ್ಮಾನ ಮಾಡುವಷ್ಟು ಔದಾರ್ಯವುಳ್ಳ ಸಂಘ ಸಂಸ್ಥೆಗಳು ನಮ್ಮಲ್ಲಿ ಕಡಿಮೆ, ಸನ್ಮಾನ ಮಾಡಿಸಿಕೊಳ್ಳುವ ಯೋಗಾಯೋಗವುಳ್ಳ ನಾಯಕಿಯರೂ ಅಪರೂಪ ಅನ್ನುವಷ್ಟು ಅಪರೂಪ. ನಾಯಕಿಯರ ಪಾಡೇ ಹೀಗಿರುವಾಗ ಪೋಷಕ ನಟಿಯರ ಪಾಡು ಹೇಳುವುದೇ ಬೇಡ. ಆದರೆ, ಗಂಗಮ್ಮ ಗುಡಿ ಬೀದಿಯ ರಣಧೀರ ಕಂಠೀರವ ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕರ ಸಂಘ ತುಸು ಅಪರೂಪ ಅನ್ನುವಂಥ ವೇದಿಕೆ.
ಯುಗಾದಿ ಉತ್ಸವದ ಪ್ರಯುಕ್ತ ಬೆಂಗಳೂರಿನ ಗಂಗಮ್ಮ ಗುಡಿ ಬೀದಿಯ ರಣಧೀರ ಕಂಠೀರವ ವೇದಿಕೆ ಇತ್ತೀಚೆಗೆ ನಟಿ ಹಾಗೂ ಶಾಸಕಿ ಉಮಾಶ್ರೀ ಅವರನ್ನು ಸನ್ಮಾನಿಸಿತು. ಸ್ಮರಣಿಕೆ, ಫಲಪುಷ್ಪ ದ ಸನ್ಮಾನ ಪಡೆದ ಉಮಾಶ್ರೀ ಅವರಿಗೆ ಕೊರಳ ಸೆರೆಯುಬ್ಬಿದ ಅನುಭವ. ಅದೇ ಧನ್ಯತೆ ಸಂಘದ ಯುವ ಸದಸ್ಯರಿಗೆ.
ಜನ ನನ್ನ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ದ್ಯೋತಕವೇ ಈ ಸನ್ಮಾನ. ಜನರ ಋಣ ತೀರಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದು ಉಮಾಶ್ರೀ ಭಾವುಕರಾದರು. ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಗುರ್ತಿಸಿ, ಆನಂತರ ವ್ಯಕ್ತಿಗಳನ್ನು ಸನ್ಮಾನಿಸುವಂತೆ ಉಮಾಶ್ರೀ ಸಂಘದ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಸಂಘದ ಅಧ್ಯಕ್ಷ ಊರುಕೆರೆ ಜಿ.ದಯಾನಂದ, ಕಾರ್ಯದರ್ಶಿ ಬಿ.ವಿ.ಶ್ರೀನಾಥ್ ಸನ್ಮಾನ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕನ್ನಡ ನಟಿಯರನ್ನು ಗೌರವಿಸುವ ಇಂಥ ಕಾರ್ಯಕ್ರಮಗಳು ಹೆಚ್ಚಾಗಲೆಂದು ಹಾರೈಸೋಣ!


Click it and Unblock the Notifications