ಪ್ರಖ್ಯಾತ ಸಿನಿಮಾ ಛಾಯಾಗ್ರಾಹಕ ಆರ್.ಮಧುಸೂದನ್ ನಿಧನ
'ಭಕ್ತ ಕನಕದಾಸ"ದಿಂದ ಹಿಡಿದು 'ಶಾಂತಿಕ್ರಾಂತಿ"ವರೆಗೆ ತಮ್ಮ ಕೆಮೆರಾ ಕಣ್ಣಿನಿಂದ ಸಿನಿಮಾಭಿಮಾನಿಗಳ ಮನಗೆದ್ದ ಆರ್.ಮಧುಸೂದನ್ ಗುರುವಾರ ರಾತ್ರಿ ಚೆನ್ನೈನಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ, ಮಗಳು ಮತ್ತು ಅಪಾರ ಸಿನಿಮಾ ಸ್ನೇಹಿತರನ್ನು ಮಧುಸೂದನ್ ಅಗಲಿದ್ದಾರೆ.
ರಾಷ್ಟ್ರ ಮಟ್ಟದ ಛಾಯಾಗ್ರಹಣಕಾರರಾದ ಎಸ್.ಡಿ.ಲಾಲ್ ಮತ್ತು ದ್ವಾರಕಾ ದ್ವಿವೇಜ ಜೊತೆ ಕೆಲಸ ಮಾಡಿದ ಅಪರೂಪದ ಪ್ರತಿಭೆ ಮಧುಸೂದನ್ ತಣ್ಣಗಿನ ಮನುಷ್ಯ. ಸರಳ ಜೀವಿ ಎಂದೇ ಹೆಸರುವಾಸಿ. ಒಂದು ಪೊಸಿಷನ್ನಲ್ಲಿ ಕೆಮೆರಾ ಕಣ್ಣನ್ನು ನೆಟ್ಟರೆ ಮುಗಿಯಿತು, ಇಡೀ ಶಾಟ್ ಮುಗಿಯುವವರೆಗೆ ಆ ಕೆಮೆರಾ ಕದಲಕೂಡದು. ಅದು ಮಧುಸೂದನ್ ಕೆಲಸದ ವೈಶಿಷ್ಟ್ಯ.
ಕನ್ನಡ ಚಿತ್ರ ನಿರ್ದೇಶಕ ವೈ.ಆರ್.ಸ್ವಾಮಿಯವರ ತಮ್ಮನಾದ ಮಧುಸೂದನ್ ಛಾಯಾಗ್ರಹಣದ ವೃತ್ತಿ ಶುರುವಾದದ್ದು ಭಕ್ತ ಕನಕದಾಸ ಚಿತ್ರದ ಮೂಲಕ, 1960ರಲ್ಲಿ. ತಮ್ಮ ಅನನ್ಯ ಕೆಲಸದಿಂದಲೇ ಛಾಪು ಮೂಡಿಸಿದ ಇವರನ್ನು ಹುಡುಕಿಕೊಂಡು ಬಂದವರು ಹುಣಸೂರು ಕೃಷ್ಣಮೂರ್ತಿ. ತಮ್ಮ ರತ್ನಮಂಜರಿ ಚಿತ್ರದಲ್ಲಿ ಹುಣಸೂರು ಮಧುಸೂದನ್ಗೆ ಅವಕಾಶ ಕೊಟ್ಟರು. ಆಮೇಲೆ ತೆರೆ ಕಂಡ ಸ್ವರ್ಣ ಗೌರಿ ಹೆಸರು ತಂದುಕೊಟ್ಟಿತು.
ಹಾಸ್ಯನಟ ರತ್ನಾಕರ್ ಜೊತೆ ಸೇರಿ ಮಧುಸೂದನ್ ಶನಿ ಪ್ರಭಾವ ಎಂಬ ಚಿತ್ರವನ್ನೂ ಮಾಡಿದರು. ಶಂಕರ್ ಗುರು, ನಾನು ನನ್ನ ಹೆಂಡ್ತಿ, ಹಾವಿನ ಹೆಡೆ, ನೀ ನನ್ನ ಗೆಲ್ಲಲಾರೆ, ಅದೇ ಕಣ್ಣು, ಪ್ರೇಮಲೋಕ, ರಣಧೀರ, ಶಾಂತಿಕ್ರಾಂತಿ ಮಧುಸೂದನ್ ಕೆಲಸ ಮಾಡಿದ ಕೆಲವು ಚಿತ್ರಗಳು. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಸುಮಾರು 100 ಚಿತ್ರಗಳಲ್ಲಿ ಮಧುಸೂದನ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಚಿತ್ರರಂಗದ ಅನೇಕ ನಟ- ನಟಿಯರು ಮಧುಸೂದನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.(ಇನ್ಫೋ ವಾರ್ತೆ)


Click it and Unblock the Notifications