‘ಮಿಸ್ ಕ್ಯಾಲಿಫೋರ್ನಿಯಾ’ ಬೆನ್ನಲ್ಲಿ ಕೋಡ್ಲು!
ಕ್ಯಾಲಿಫೋರ್ನಿಯಾದ ಬೇ ಏರಿಯಾದ ಸುಮನೋಹರ ಪ್ರದೇಶಗಳು, ಕಟ್ಟಡಗಳು ‘ಮಿಸ್ ಕ್ಯಾಲಿಫೋರ್ನಿಯಾ’ ಚಿತ್ರದ ಆಕರ್ಷಣೆಯನ್ನು ಹೆಚ್ಚಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ‘ಲವ್ ಮೂಡಿನಲ್ಲಿ ...’ ಎಂಬ ಹಾಡಿನೊಂದಿಗೆ ಅಂದು ಚಿತ್ರೀಕರಣ ಆರಂಭಗೊಂಡಿತು.
ನಾಯಕ ದಿಗಂತ್, ನಾಯಕಿ ಜಾನು ಮತ್ತು ಬೇ ಏರಿಯಾದ ಜನಪ್ರಿಯ ನೃತ್ಯಶಾಲೆ ನಾಚ್ನ ಸಹಕಲಾವಿದರು ಹಾಡಿಗೆ ಹೆಜ್ಜೆ ಹಾಕಿದರು. ಹಾಡಿಗೆ ರಾಮಪ್ರಸಾದ್ ಮತ್ತು ಕವಿತಾ ಕೃಷ್ಣಮೂರ್ತಿ ಧ್ವನಿಯಾಗಿದ್ದರು. ನೃತ್ಯ ನಿರ್ದೇಶಕ ರಾಘವೇಂದ್ರ ಅವರಲ್ಲಂತೂ ಉತ್ಸಾಹ ತುಂಬಿತುಳುಕುತ್ತಿತ್ತು.
‘ಫಸ್ಟ್ ಟೈಮ್ ಹೇಗಿತ್ತು ನಂಗೆ...’ ಎಂಬ ಕನಸಿನ ಗೀತೆಯನ್ನು ಈ ಪ್ರದೇಶದಲ್ಲಿಯೇ ಚಿತ್ರೀಕರಿಸಲಾಯಿತು. ಚಿತ್ರದ ಇನ್ನೊಬ್ಬ ನಾಯಕಿ ನ್ಯೂಯಾರ್ಕ್ನ ಬೆಡಗಿ ಸೌಮ್ಯ ಮತ್ತು ದಿಗಂತ್ ಹಾಡಿನಲ್ಲಿ ತಲ್ಲೀನರಾಗಿದ್ದರು. ಈ ಹಾಡಿನ ನೃತ್ಯಕ್ಕೆ ಪೂರಕವಾಗುವಂತೆ ಸಂದೀಪ್ಮಲಾನಿ ಅವರು, ನೃತ್ಯ ನಿರ್ದೇಶಕ ರಾಘವೇಂದ್ರ ಅವರಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು. ಈ ಹಾಡಿಗಾಗಿ ನಾಯಕಿ ಸೌಮ್ಯಾಗೆ ಸಂದೀಪ್ ಮಲಾನಿ ಪತ್ನಿ ರೇಶ್ಮಾ ಸಂದೀಪ್ ಅದ್ಭುತ ವರ್ಣರಂಜಿತ ವಸ್ತ್ರವಿನ್ಯಾಸ ಮಾಡಿದ್ದರು. 17ಮೈಲ್ ಡ್ರೆೃವ್, ಮಾಂಟ್ರೆ ಬೀಚ್, ಮ್ಯೂರ್ ವುಡ್ಸ್ , ಸ್ಟಿಂಟ್ಸನ್ ಬೀಚ್ ಮತ್ತಿತರ ಪ್ರದೇಶಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.
‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ...’ ಎಂಬ ರೀಮಿಕ್ಸ್ ಗೀತೆಯ ಚಿತ್ರೀಕರಣ ಈ ಭಾಗದ ಕನ್ನಡಿಗರ ಪಾಲಿಗೆ ರೋಮಾಂಚನ ತಂದಿತ್ತು. ‘ಪ್ರೀತಿ, ಪ್ರೇಮ, ಪ್ರಣಯ’ ಚಿತ್ರದ ನಿರ್ಮಾಪಕ ಮತ್ತು ಗಾಯಕ ರಾಮಪ್ರಸಾದ್ ಸೇರಿದಂತೆ ವಿವಿಧ ಕನ್ನಡ ಕೂಟಗಳ ಸದಸ್ಯರು, ಚಿತ್ರೀಕರಣದ ವೀಕ್ಷಣೆಗೆಂದು ಆಗಮಿಸಿದ್ದ ಪ್ರೇಕ್ಷಕರು ಈ ಹಾಡಿಗೆ ಧ್ವನಿಗೂಡಿಸಿದ್ದು ಒಂದು ವಿಶೇಷ. ಅಲ್ಲದೇ ಬೇ ಏರಿಯಾದ ಸುಪ್ರಸಿದ್ದ ರಾಗ ತಂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿತ್ತು.
ಚಿತ್ರದಲ್ಲಿ ಎಕ್ಸೋಡಸ್ ಮತ್ತು ನೆಟ್ಸ್ಕೇಲರ್ ಸಂಸ್ಥೆಯ ಸ್ಥಾಪಕ ಬಿ.ವಿ.ಜಗದೀಶ್, ಕನ್ನಡ ಕೂಟದ ಸದಸ್ಯ ಜಗನ್ನಾಥ್ ರಘು ಅವರು, ಕನ್ನಡ ಕೂಟದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರವಿ ದತ್ತಾತ್ರೇಯ ಸಂಯೋಜನೆಯ ‘ಜಾನು ಓ ಜಾನು...’ ಎಂಬ ಗೀತೆಯನ್ನು ಫಾಸ್ಟ್ ಬೀಟ್ನಲ್ಲಿ ಇಲ್ಲಿ ಚಿತ್ರೀಕರಿಸಿದ್ದು ಮತ್ತೊಂದು ವಿಶೇಷ. ರಷ್ಯಾದ ಅಲೆಕ್ಸೀ ಉಸ್ತಿನೋವ್ ಈ ಹಾಡಿಗೆ ವೈವಿಧ್ಯಮಯವಾಗಿ ವಾದ್ಯ ಸಂಯೋಜನೆ ಮಾಡಿದ್ದಾರೆ. ಸಿಲಿಕಾನ್ ವ್ಯಾಲಿಯ ಪ್ರಸಿದ್ಧ ಕಟ್ಟಡಗಳಾದ ಸಿಸ್ಕೋ, ಒರ್ಯಾಕಲ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಅವುಗಳ ಸುತ್ತಮುತ್ತಲಿರುವ ರಮಣೀಯ ಗಾರ್ಡನ್ಗಳ ಸನ್ನಿಧಿಯಲ್ಲೇ ಈ ಹಾಡನ್ನು ಚಿತ್ರೀಕರಿಸಲಾಗಿದೆ.
ಹಾಡುಗಳ ಸಂಭ್ರಮ ಮಾತ್ರವಲ್ಲದೇ ಹಲವು ಹೃದಯಸ್ಪರ್ಶಿ ಮತ್ತು ಭಾವಸ್ಪರ್ಶಿ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಿದೆ. ಹಾಲಿವುಡ್ನ ರಂಗಕಲಾವಿದ ಲೇನ್ ಗ್ರೋವರ್ ಚಿತ್ರದಲ್ಲಿ ನಾಯಕಿ ಜಾನೂಳ ಗೆಳೆಯ ಮತ್ತು ಕೋಚ್ ಆಗಿ ಅಭಿನಯಿಸಿದ್ದಾರೆ.
ಚಿತ್ರ ಅದ್ಧೂರಿಯಾಗಿ ಮೂಡಿಬರಲು ಪೂರಕವಾಗುವಂತೆ ಚಿತ್ರದ ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕ ರವಿ ದತ್ತಾತ್ರೇಯ ಹಣದ ಹೊಳೆ ಹರಿಸಿದ್ದಾರೆ. ಚಿತ್ರತಂಡಕ್ಕೆ ತಮ್ಮ ಮನೆಯಲ್ಲಿ ತಂಗಲು ಜಾನು ಅವಕಾಶ ಮಾಡಿಕೊಟ್ಟಿದ್ದರು. ಚಿತ್ರತಂಡಕ್ಕೆ ಅವರು ನೀಡಿದ ಆತಿಥ್ಯಕ್ಕೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದೆ.
ಕೋಡ್ಲು ರಾಮಕೃಷ್ಣ ಚಿತ್ರ ನಿರ್ದೇಶಿಸಿದ್ದು, ಪ್ರಶಸ್ತಿವಿಜೇತ ಛಾಯಾಗ್ರಾಹಕ ಎ.ಸಿ.ಮಹೇಂದ್ರನ್ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications